ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಡಿ ಆಪಾದಿತನಾಗಿರುವ ಪ್ರಜಲ್ವ ರೇವಣ್ಣನನ್ನು ಬಂಧಿಸಲು ಎಸ್ಐಟಿ ಬ್ಲ್ಯೂ ಕಾರ್ನ್ರ್ ನೋಟಿಸ್ ಸೇರಿದಂತೆ ತನ್ನೆಲ್ಲ ಪ್ರಯತ್ನ ಮುಂದುವರಿಸಿದೆ. ಈ ನಡುವೆ ಕುಟುಂಬ ಮತ್ತು ಆಪ್ತರ ಅಸಹನೆಯೂ ಶುರುವಾಗಿದೆ.
ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಕುಟುಂಬದ ಮಾನ ಹರಾಜಾಗಿದೆ. ಎಷ್ಟು ದಿನಗಳವರೆಗೆ ತಲೆಮರೆಸಿಕೊಳ್ಳಲು ಸಾಧ್ಯ? ಎಸ್ಐಟಿ ಬಂಧನಕ್ಕೆ ಬಲೆ ಬೀಸಿದೆ. ಪ್ರಜ್ವಲ್ ಬಂದು ಪೊಲೀಸರಿಗೆ ಶರಣಾದರೆ ಸ್ವಲ್ಪವಾದರೂ ಮರ್ಯಾದೆ ಉಳಿಯುತ್ತದೆ. ಪೊಲೀಸರೇ ಆರೆಸ್ಟ್ ಮಾಡಿದರೆ ತೀವ್ರ ಮುಜುಗರ ಅನುಭವಿಸಬೇಕಾಗುತ್ತದೆ. ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿರುವುದರಿಂದ ವಿಚಾರಣೆಗೆ ಹಾಜರಾಗಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ವಿಚಾರಣೆಗೆ ಹಾಜರಾಗದೆ ಕಾನೂನು ಮೊರೆ ಹೋಗುವುದು ಸರಿಯಲ್ಲ. ಹೀಗಾಗಿ ವಕೀಲರ ಜತೆ ಸಮಾಲೋಚನೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಕುಟುಂಬದವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಎಷ್ಟು ದಿನ ಕಣ್ಮರೆಸಿಕೊಂಡು ಇರಲು ಸಾಧ್ಯ? ತಕ್ಷಣ ವಿದೇಶದಿಂದ ವಾಪಸ್ ಆಗಿ ಶರಣಾಗುವಂತೆ ಕುಟುಂಬದವರು ಹಾಗೂ ಆಪ್ತರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಿಂದ ಕುಟುಂಬ ಮತ್ತು ಪಕ್ಷಕ್ಕೆ ಕೆಟ್ಟು ಹೆಸರು ಬಂದಿದೆ. ಬಂಧನಕ್ಕೂ ಮುನ್ನ ಎಸ್ಐಟಿ ಮುಂದೆ ಶರಣಾಗುವಂತೆ ದೇವೇಗೌಡರು ಖಡಕ್ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.