ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದೇನೋ ನಿಜ. ಆದರೆ, ತನಗೆ ಅಂಕ ಮತ್ತಷ್ಟು ಹೆಚ್ಚು ಬರಬೇಕಿತ್ತು ಎನ್ನುವರ ಸಂಖ್ಯೆಯೂ ಅಧಿಕವಾಗಿದೆ. ಅದಕ್ಕಾಗಿ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಆದರೆ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ನಲ್ಲಿನ ಲೋಪದೋಷದಿಂದಾಗಿ ಸ್ಕ್ಯಾನ್ ಪ್ರತಿ ಪಡೆಯಲಾಗದೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲೂ ಆಗದೆ ವಿದ್ಯಾರ್ಥಿಗಳು ಮತ್ತವರ ಪಾಲಕರು ಪರದಾಡುವಂತಾಗಿದೆ.
ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 20ರಿಂದ 30ರವರೆಗೆ ಅವಕಾಶ ಕಲ್ಪಿಸಿದೆ. ಅದೇ ರೀತಿ ಅಂಕಗಳ ಮರುಎಣಿಕೆ ಮತ್ತು ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24ರಿಂದ ಜೂನ್ 6ವರೆಗೆ ಮಂಡಳಿ ಅನುವು ಮಾಡಿದೆ.
ಆದರೆ ಆರಂಭದ ದಿನವೇ ಅಂದರೆ ನಿನ್ನೆಯೇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವೆಬ್ಸೈಟ್ನಲ್ಲಿ ಲಿಂಕ್ ಇರಲಿಲ್ಲ. ಈ ಸಮಸ್ಯೆ ಬುಧವಾರ ಸಹ ಮುಂದುವರಿದಿದ್ದು ಇಂದೂ ಹಲವಾರು ವಿದ್ಯಾರ್ಥಿಗಳು ಸ್ಕ್ಯಾನ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ವೆಬ್ಸೈಟ್ನಲ್ಲಿ ಲಭ್ಯವಿರದ್ದರಿಂದ ಪರದಾಡಿದರು.
ಇನ್ನು ಈ ತಾಂತ್ರಿಕ ದೋಷಕ್ಕೆ ತಾತ್ಕಾಲಿಕ ಪರಿಹಾರವಾಗಿ ವೆಬ್ಸೈಟ್ನಲ್ಲಿ ಪ್ರತ್ಯೇಕ ಲಿಂಕ್ ಒಂದನ್ನು ಸ್ಕ್ರಾಲಿಂಗ್ನಲ್ಲಿ ನೀಡಲಾಗಿದೆ. ಆ ಲಿಂಕ್ ಮತ್ತೊಂದು ತಲೆನೋವಾಗಿದೆ. ವೆಬ್ಸೈಟ್ನ ಇಂಗ್ಲಿಷ್ ಮುಖಪುಟದಲ್ಲಿ ಹೊಸ ಲಿಂಕ್ ತೆರೆದುಕೊಳ್ಳುತ್ತಿದೆ. ಆದರೆ, ಕನ್ನಡ ಮುಖಪುಟದಲ್ಲಿ ಸಾಧ್ಯವಾಗುತ್ತಿಲ್ಲ.
ಇದರ ಬಗ್ಗೆ ‘ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ, ಅವರನ್ನು ವಿಜಯವಾಣಿ ಸಂಪರ್ಕ ಮಾಡಿದಾಗ ‘ಬೆಳಗ್ಗೆಯಿಂದ ತಾಂತ್ರಿಕ ಸಮಸ್ಯೆ ಆಗಿದೆ. ಶೀಘ್ರ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಅದಾದ ಬಳಿಕ ಒಂದಷ್ಟು ತಾತ್ಕಾಲಿಕ ಪರಿಹಾರ ಒದಗಿಸಿದ್ದರೂ, ಇನ್ನೂ ಒಂದಷ್ಟು ಗೊಂದಲ ಮುಂದುವರಿದಿದೆ. ಸ್ಕ್ಯಾನ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ದುಬಾರಿ ಶುಲ್ಕ ಪಡೆದರೂ ಸೇವೆ ಮಾತ್ರ ಮರೀಚಿಕೆ ಆಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಅಲವತ್ತುಕೊಂಡಿದ್ದಾರೆ.
ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು…