ಬೆಂಗಳೂರು : ನಗರದ ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ವಂಚನೆ ಪ್ರಕರಣದ ಸಂಬಂಧ 8 ನಿರ್ದೇಶಕರ ಮನೆ, ಕಚೇರಿ ಸೇರಿ 11 ಕಡೆ, ಹನುಮಂತನಗರ ಪೊಲೀಸರ ನೇತೃತ್ವದ ತಂಡ ಇಂದು ದಾಳಿ ನಡೆಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದುವರೆಗೆ ಈ ಸೊಸೈಟಿಯ ವಿರುದ್ಧ 96 ಠೇವಣಿದಾರರು ದೂರು ನೀಡಿದ್ದು, ಸಾಫ್ಟ್ವೇರ್ ತಂತ್ರಜ್ಞಾನ ಬಳಸಿ ಸೊಸೈಟಿಯ ಆಡಿಟ್ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸೊಸೈಟಿಯ ನಿರ್ದೇಶಕರಾದ ಕೆ.ಎನ್.ವೆಂಕಟನಾರಾಯಣ, ಸಂಧ್ಯಾ ಮಂಜುನಾಥ್, ರಾಘವೇಂದ್ರ ಭಟ್, ಸಚ್ಚಿದಾನಂದ ಮೂರ್ತಿ, ಪ್ರಭಾಕರ್, ವಿಶ್ವದತ್ತ, ಗಾಯತ್ರಿ, ಅನುಸೂಯ ಅವರುಗಳ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಲಾಯಿತು. ದಾಳಿ ವೇಳೆ ಪತ್ತೆಯಾದ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ಗಿರಿನಗರದಲ್ಲಿ 2, ಶಂಕರಪುರಂನಲ್ಲಿ 1, ಹನುಮಂತನಗರದಲ್ಲಿ 4 ಸೇರಿ, ದಾಳಿ ನಡೆದ 11 ಕಡೆಗಳಲ್ಲಿ ಮಹಜರು ನಡೆಸಿದಾಗ ಜಪ್ತಿ ಮಾಡಲಾದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಚಿಕಿತ್ಸೆ ಮುಗಿಸಿ ಅಮೆರಿಕಾದಿಂದ ವಾಪಸ್ಸಾದ ರಜನಿಕಾಂತ್
252 ಕೋಟಿ ರೂ. ಸಾಲ: 300ಕ್ಕೂ ಅಧಿಕ ಜನರಿಗೆ 252 ಕೋಟಿ ರೂ. ಸಾಲ ನೀಡಲಾಗಿದೆ. 50 ಸಾವಿರಕ್ಕಿಂತ ಕಡಿಮೆ ಸಾಲ ಪಡೆದ 250 ಮಂದಿಗೆ ಭದ್ರತೆ ಇಲ್ಲದೇ ಒಟ್ಟು 50 ಲಕ್ಷ ರೂ.ವರೆಗೆ ಸಾಲ ನೀಡಲಾಗಿದೆ. ಸೊಸೈಟಿಯಿಂದ ಸಾಲ ಪಡೆದ ಕೆಲವರು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿರುವುದು ಕಂಡು ಬಂದಿದ್ದು, ಅವರು ಖರೀದಿಸಿದ ಆಸ್ತಿಯನ್ನು ಕೆಲ ಠೇವಣಿದಾರರಿಗೆ ನೀಡಿ ಹಣ ಹಿಂತಿರುಗಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದುವರೆಗೆ 19 ಕೋಟಿ ರೂ.ನ್ನು ಠೇವಣಿದಾರರಿಗೆ ಹಿಂತಿರುಗಿಸಲಾಗಿದೆ ಎನ್ನಲಾಗಿದೆ.
ಸೊಸೈಟಿ ಮುಖ್ಯಸ್ಥರಾದ ವೆಂಕಟನಾರಾಯಣ್ ಹಾಗೂ ಇವರ ಪುತ್ರ ಕೃಷ್ಣ ಪ್ರಸಾದ್ರನ್ನು ವಿಚಾರಣೆ ನಡೆಸಲಾಗಿದೆ. ಸೊಸೈಟಿಯಿಂದ ಇದುವರೆಗೆ ಸಾಲ ಪಡೆದವರು, ಹೂಡಿಕೆ ಮಾಡಿದ ಠೇವಣಿದಾರರು ಸೇರಿ ಸೊಸೈಟಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. ಠೇವಣಿದಾರರಿಗೆ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಯಾರಿಗೂ ವಂಚಿಸುವ ಉದ್ದೇಶ ನಮಗಿಲ್ಲ. ನೀಡಿರುವ ಸಾಲ ವಾಪಾಸ್ಸಾಗುತ್ತಿದ್ದಂತೆ ಎಲ್ಲ ಠೇವಣಿದಾರರ ಹಣವನ್ನೂ ಹಿಂತಿರುಗಿಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡರು ಆಮೀರ್-ಕಿರಣ್ … ಜತೆಗೆ ನಾಗಚೈತನ್ಯ
ಆರೋಪವೇನು ? : ವಶಿಷ್ಠ ಸೊಸೈಟಿ ತನ್ನ ಠೇವಣಿದಾರರಿಗೆ ಮೆಚ್ಯೂರಿಟಿ ಹಣ, ಮೆಚ್ಯೂರಿಟಿ ಹಣದ ಮೇಲಿನ ಬಡ್ಡಿ ಹಣವನ್ನು ನೀಡದೇ ಕಳ್ಳಾಟ ಆಡತೊಡಗಿದೆ. ದೂರು ನೀಡಿದ ಠೇವಣಿದಾರರು ಬ್ಯಾಂಕ್ಗೆ ಹೋಗಿ ಕೇಳಿದಾಗ, ಕರೊನಾ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ಕೊಟ್ಟ ಸಾಲಗಳು ಮರುಪಾವತಿಯಾಗಿಲ್ಲ. ಕೆಲ ತಿಂಗಳಿನಲ್ಲೇ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.