ಕೋಲ್ಕತ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಮ್ಮ ನಾಯಕತ್ವದ ಮೂಲಕ ರಾಷ್ಟ್ರೀಯ ತಂಡದಲ್ಲಿ ಹೊಸ ಕ್ರಾಂತಿ ಮೂಡಿಸಿದ ಆಟಗಾರ. ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ ಗಂಗೂಲಿ, ನಾಯಕತ್ವದ ವಿಷಯದಲ್ಲಿ ಇತರರಿಗೆ ಸ್ಫೂರ್ತಿಯಾಗಿದ್ದರು. ಆದರೆ, ಗಂಗೂಲಿ ನಾಯಕತ್ವದ ಜಾದೂ ಐಪಿಎಲ್ನಲ್ಲಿ ನಡೆಯಲಿಲ್ಲ. ಆರಂಭಿಕ ಮೂರು ಆವೃತ್ತಿಗಳಲ್ಲಿ ತವರು ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡ ಮುನ್ನಡೆಸಿದ್ದ ಗಂಗೂಲಿಗೆ ಯಶಸ್ಸು ಅನ್ನೋದು ಸಿಗಲೇ ಇಲ್ಲ. ಬಾಲಿವುಡ್ ನಟ ಶಾರೂಕ್ ಖಾನ್ ಒಡೆತನ ಕೆಕೆಆರ್ ಗಂಗೂಲಿ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ್ದೇ ಜಾಸ್ತಿ. ತಂಡದ ವೈಫಲ್ಯಕ್ಕೆ ದಾದಾ ಇದೀಗ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಟಾಮ್ ಮೂಡಿ ಬೆಸ್ಟ್ ಟಿ20 ತಂಡಕ್ಕೆ ರೋಹಿತ್ ಶರ್ಮ ನಾಯಕ..!
ಐಪಿಎಲ್ ಉದ್ಘಾಟನಾ ಆವೃತ್ತಿ 2008 ರಿಂದ 2010ರವರೆಗೂ ಗಂಗೂಲಿ ಕೆಕೆಆರ್ ನಾಯಕರಾಗಿದ್ದರು. ತಂಡದ ವೈಫಲ್ಯದಿಂದ ಬೇಸತ್ತ ತಂಡದ ಮಾಲೀಕ ಶಾರೂಖ್ ಖಾನ್ ಸೌರವ್ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದರು. ಜತೆಗೆ ತಂಡವನ್ನು ದಾದಾ ತೊರೆದರು. ಸ್ಥಳೀಯ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿರುವ ಗಂಗೂಲಿ, 4ನೇ ಆವೃತ್ತಿಯ ವೇಳೆ ಗಂಭೀರ್ ಸಂದರ್ಶನವೊಂದನ್ನು ನೋಡಿದ್ದೆ, ನನಗೆ ತಂಡದ ಸಂಪೂರ್ಣ ಜವಾಬ್ದಾರಿ ನೀಡುವುದಾಗಿ ಶಾರೂಖ್ ಹೇಳಿದ್ದಾರೆ ಎಂದರು. ಇದೇ ಥರದ ಭರವಸೆಯನ್ನು 2008ರಲ್ಲೂ ನನಗೆ ನೀಡಲಾಗಿತ್ತು. ಆದರೆ, ಸಾಧ್ಯವಾಗಿಲ್ಲ. ಮುಂಬೈ, ಸಿಎಸ್ಕೆ ತಂಡಗಳಲ್ಲಿ ಅಂಥ ವ್ಯವಸ್ಥೆ ಇಲ್ಲ. ತಂಡದ ಆಯ್ಕೆಯನ್ನು ನಾಯಕನಿಗೆ ವಹಿಸಲಾಗುತ್ತದೆ ಎಂದು ಗಂಗೂಲಿ ಶಾರೂಖ್ ಮೇಲಿನ ಅಸಮಾಧಾನವನ್ನು ಹೊರಹಾಕಿದರು.
ಇದನ್ನೂ ಓದಿ: ವಿಂಬಲ್ಡನ್ ರದ್ದುಗೊಂಡರೂ ಟೆನಿಸ್ ಆಟಗಾರರಿಗೆ ಸಿಗಲಿದೆ ಬಹುಮಾನ!
2011ರಲ್ಲಿ ಸೌರವ್ ಗಂಗೂಲಿ ಅವರನ್ನು ಕೈ ಬಿಟ್ಟು 11.04 ಕೋಟಿ ರೂಪಾಯಿಗೆ ಗೌತಮ್ ಗಂಭೀರ್ ಅವರನ್ನು ಕೊಂಡುಕೊಳ್ಳಲಾಯಿತು. ಬಳಿಕ ಮುಂದಿನ 7 ಆವೃತ್ತಿಗಳಿಗೆ ಗಂಭೀರ್ ಕೆಕೆಆರ್ ತಂಡ ಮುನ್ನಡೆಸಿದರು. 2011ರಲ್ಲಿ ಕೆಕೆಆರ್ ವಿಫಲರಾದರೂ 2012 ಹಾಗೂ 2014ರಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿತು. 2018ರಲ್ಲಿ ಗಂಭೀರ್ ಕೈಬಿಟ್ಟು 7.4 ಕೋಟಿ ರೂಪಾಯಿಗೆ ದಿನೇಶ್ ಕಾರ್ತಿಕ್ ಅವರನ್ನು ಕೊಂಡುಕೊಂಡು ನಾಯಕತ್ವ ನೀಡಲಾಗಿದೆ. ಗಂಗೂಲಿ ನಾಯಕತ್ವದಲ್ಲಿ ಕೆಕೆಆರ್ 27 ಪಂದ್ಯಗಳಲ್ಲಿ 13ರಲ್ಲಿ ಗೆಲುವು ಸಾಧಿಸಿದರೆ, ಗಂಭೀರ್ ನಾಯಕತ್ವದಲ್ಲಿ 69 ಗೆಲುವು ಕಂಡಿತ್ತು. ಇದೀಗ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಇದುವರೆಗೂ ಆಡಿರುವ 30 ಪಂದ್ಯಗಳಲ್ಲಿ 15ರಲ್ಲಿ ಜಯ ದಾಖಲಿಸಿದೆ.