ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಕುರಿತು ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2012ರಲ್ಲಿ ಸಮಾಜವಾದಿ ಪಕ್ಷದ ಸಂಸದನ ಶರ್ಟ್ ಕಾಲರ್ ಹಿಡಿಯಲು ಯತ್ನಿಸಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.
ಜಾರ್ಖಂಡ್ನ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆಯನ್ನು ಖಂಡಿಸಿ ವಿಪಕ್ಷಗಳ ಸದಸ್ಯರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ದುಬೆ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಗೃಹ ಸಚಿವ ಅಮಿತ್ ಷಾ ಪುರುಷರು ಏಕೆ ಮಹಿಳೆಯರ ಕುರಿತಾದ ಸಮಸ್ಯೆಗಳನ್ನು ಪ್ರಶ್ನಿಸಬಾರದು ಎಂದಿದ್ದಾರೆ.
2012ರಲ್ಲಿ ಲೋಕಸಭೆಯಲ್ಲಿ ಅಂದಿನ ದಿನ ಸಚಿವರಾಗಿದ್ದ ವಿ. ನಾರಾಯಣಸ್ವಾಮಿ ಅವರು ಮಸೂದೆ ಒಂದನ್ನು ಮಂಡಿಸುತ್ತಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಸಂಸದ ಯಶ್ವೀರ್ ಸಿಂಗ್ ಅವರು ನಾರಾಯಣಸ್ವಾಮಿ ಅವರ ಕೈಯಲ್ಲಿದ್ದ ಹಾಳೆಗಳನ್ನು ಕಸಿದು ಎಸೆಯಲು ಯತ್ನಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಸೋನಿಯಾ ಗಾಂಧಿ ಅವರು ಸಂಸದನ ಶರ್ಟ್ ಕಾಲರ್ ಹಿಡಿಯಲು ಯತ್ನಿಸಿದ್ದರು.
ಇದನ್ನೂ ಓದಿ: ಸಂಕಷ್ಟ ಸೂತ್ರ ಇಲ್ಲವೆಂದ ಮೇಲೆ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಬಿಟ್ಟರು: ಮಾಜಿ ಸಿಎಂ ಎಚ್ಡಿಕೆ
ಕೂಡಲೇ ಮದ್ಯಪ್ರವೇಶಸಿದ ನಾವು (ಬಿಜೆಪಿ ಸಂಸದರು) ಯಶ್ವೀರ್ ಸಿಂಗ್ ಅವರನ್ನು ರಕ್ಷಿಸಿದ್ದೆವು. ನಾನು ಸೋನಿಯಾ ಅವರಿಗೆ ನೀವು ಡಿಕ್ಟೆಟರ್ ಅಥವಾ ರಾಣಿ ಅಲ್ಲ ಈ ರೀತಿ ನಡೆದುಕೊಳ್ಳುವುದಕ್ಕೆ ಎಂದು ಹೇಳಿದ್ದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಸಹ ಸೋನಿಯಾ ಗಾಂಧಿ ಅವರ ನಡೆಯನ್ನು ಖಂಡಿಸಿದ್ದರು. ಈಗ ನೋಡಿದರೆ ಇಂಡಿಯಾ ಎಂಬ ಮೈತ್ರಿಕೂಟದಲ್ಲಿ ಅವರ ಜೊತೆ ಕೈ ಜೋಡಿಸಿರುವುದು ಯಾವ ರೀತಿಯ ನಡೆ ಎಂದು ಸದನದಲ್ಲಿ ಪ್ರಶ್ನಿಸಿದ್ದಾರೆ.
ಇತ್ತ ಸಂಸದ ನಿಶಿಕಾಂತ್ ದುಬೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ಬಿಜೆಪಿಯ ಮಹಿಳಾ ಸಂಸದರೊಬ್ಬರು ಇದರ ಉಸ್ತುವಾರಿಯನ್ನು ಹೊರಬೇಕು ಎಂದು ಆಗ್ರಹಿಸಿ ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.