ಕಾರವಾರ: ಮಕ್ಕಳನ್ನು ದುಶ್ಚಟಗಳಿಂದ ದೂರ ಇಡುವ ಬಗ್ಗೆ ತಾಯಂದಿರು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನಿಂದ ಹಬ್ಬುವಾಡ ಗೌರಿ ಶಂಕರ ಹಾಲ್ನಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೇ ಜೀವನದ ಆಶಾಕಿರಣ ಎಂದುಕೊಂಡು ಅವರ ಮೇಲೆ ಭರವಸೆಯನ್ನು ಇಟ್ಟಿರುತ್ತೇವೆ. ಆದರೆ, ಎಷ್ಟೋ ಮಕ್ಕಳು ಪಾಲಕರಿಗೆ ತಿಳಿಯದಂತೆ ದುಷ್ಚಟಗಳ ದಾಸರಾಗುತ್ತಾರೆ. ಅದನ್ನು ತಡೆಯುವ ಶಕ್ತಿ ಪಾಲಕರಿಗಿದೆ ಎಂದರು.
ಇದನ್ನೂ ಓದಿ: ಕಾರವಾರ-ಬಿಣಗಾ ಸುರಂಗ ಮಾರ್ಗ ವೀಕ್ಷಿಸಿದ ಪುಣೆಯ ತಜ್ಞರು
ದುಶ್ಚಟಗಳಿಗೆ ಮುಕ್ತಿ ಕೊಡುವುದು ಶ್ರೀ ಕ್ಷೇತ್ರ ಧರ್ಮಸ್ಥಳ. ಪ್ರಾಮಾಣಿಕತೆ, ಶಿಸ್ತಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಾದರಿ ಎಂದರು. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಎಲ್ಲ ಭಕ್ತರು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಿರುವುದು ಸಂತಸ ಎಂದರು.
ಮಾಜಿ ಶಾಸಕ ಗಂಗಾಧರ ಭಟ್ ಮಾತನಾಡಿ, ಪಾಲಕರು ಮಕ್ಕಳ ಎದುರು ಸಾರಾಯಿ ಅಥವಾ ಸಿಗರೇಟಿನಂಥ ದುಷ್ಶಟ ಮಾಡಬಾರದು. ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅವರೂ ಮುಂದೆ ಚಟಗಳಿಗೆ ದಾಸರಾಗಬಹುದು ಎಂದು ಎಚ್ಚರಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು 41 ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಕಟ್ಟಿದ ಸಣ್ಣ ಸಂಸ್ಥೆ ಇಂದು ರಾಜ್ಯದ 22 ಜಿಲ್ಲೆಗಳಿಗೆ ವಿಸ್ತರಿಸಿದೆ. ಗಾಂಧೀಜಿ ಅವರ ರಾಮ ರಾಜ್ಯದ ಕನಸು ಮಾಡುವತ್ತ ಕಾರ್ಯಕ್ರಮ ರೂಪಿಸುತ್ತಿದೆ. ಯೋಜನೆಯಿಂದ ಶೌರ್ಯ ಘಟಕ, ಮಾಸಾಶನ ಕಾರ್ಯಕ್ರಮ, ಸುಜ್ಞಾನನಿಧಿ ಕಾರ್ಯಕ್ರಮ, ವಾತ್ಸಲ್ಯ ಮುಂತಾದ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು. ಕಾರವಾರ ಅಂಕೋಲಾದಲ್ಲಿ ಈ ಬಾರಿ 101 ಜನರಿಗೆ ಮಾಸಾಶನ ಹಾಗೂ ಇನ್ನೂ ಹಲವು ಅಶಕ್ತರಿಗೆ ವೀಲ್ ಚೇರ್ನಂಥ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೆ.ಆರ್.ನಾಯಕ, ಶ್ರೀ ಕೃಷ್ಣ ಕಾಮತ್ ಇದ್ದರು. ಆರ್ಥಿಕ ಸಂಪನ್ಮೂಲ ಸಾಕ್ಷರತಾ ಕೇಂದ್ರದ ನಾಗರಾಜ ಶೇಟ್ ಸೈಬರ್ ಕ್ರೈಂ ಬಗ್ಗೆ ವಿವರಿಸಿದರು.
ಯೋಜನೆಯ ಕಾರವಾರ ಅಂಕೋಲಾ ಕ್ಷೇತ್ರದ ಯೋಜನಾಽಕಾರಿ ವಿನಾಯಕ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕ ಶಂಭು, ಕೃಷಿ ಮೇಲ್ವಿಚಾರಕರಾದ ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ಪರಿಶೀಲನಾಕಾರಿ ನಾಗೇಂದ್ರ, ಮೇಲ್ವಿಚಾರಕ ಸಂಕೂಶ್, ವಿಜಯಾ, ಭಾವನಾ, ಲಕ್ಷ್ಮೀಶ್, ಲತಾ, ಬಸವರಾಜ, ಮಹೇಶ, ಅಶೋಕ, ಶೋಭಾ, ಸೇವಾಪ್ರತಿನಿಯಾದ ಪಂಚಮಿ, ನಾಗಲತಾ ಸಹಕರಿಸಿದರು.