ಕೊಪ್ಪಳ: ಬಾಕಿ ಮಾಸಾಶನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದೇವೆ. ಅಧಿಕಾರಿಗಳು ಸಕಾಲಕ್ಕೆ ನಮ್ಮ ಸಮಸ್ಯೆಗೆ ಸ್ಪದಿಸುತ್ತಿಲ್ಲ. ಕೆಲವರಿಗೆ 6-8 ತಿಂಗಳಿನಿಂದ ಮಾಸಾಶನ ಬಂದಿಲ್ಲ. ಇನ್ನೂ ಕೆಲವರಿಗೆ ಯುಡಿಐಡಿ ಕಾರ್ಡ್ ಕೈ ಸೇರಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಅಧಿಕಾರಿಗಳು ಸಹಕಾರ ಮಾಡದೆ, ಒಂದೇ ಕೆಲಸಕ್ಕೆ ಹತ್ತಾರು ಬಾರಿ ಓಡಾಡಿಸುತ್ತಾರೆ. ಜಿಲ್ಲಾ ಅಂಗವಿಕಲರ ಕಲ್ಯಾಣ ಕಚೇರಿಯನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಬೇಕು. ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡಬೇಕು. ಎಲ್ಲ ಅಂಗವಿಕಲರಿಗೂ ಯುಡಿಐಡಿ ಕಾರ್ಡ್ ನೀಡಬೇಕು. ನಮ್ಮ ದಾಖಲೆಗಳನ್ನು ನಾವೇ ಸ್ವಯಂ ದೃಢೀಕರಿಸಲು ಅವಕಾಶ ಕಲ್ಪಿಸಿ. ಸರ್ಕಾರಿ ಆಸ್ಪತ್ರೆಯಲ್ಲಿ ಅಂಗವಿಕಲರ ಅಧಿಕಾರಿಯನ್ನು ನೇಮಿಸಬೇಕು. ನಮಗೂ ಲಾಕ್ಡೌನ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ತಾಲೂಕು ಅಧ್ಯಕ್ಷ ಹುಲುಗಪ್ಪ ಕಾಗೆ, ಯಲ್ಲಪ್ಪ ಚಳಗೇರಿ, ಹನುಮಾಕ್ಷಿ, ಅನುರಾಧ, ಈರಪ್ಪ ಮಿಟ್ಲಕೊಡ ಇತರರಿದ್ದರು.