ಮುಂಬೈ: ‘ಶೇರ್ಷಾ’ ಚಿತ್ರದ ಯಶಸ್ಸಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಸಹ ಒಂದು ಕಾರಣ. ತೆರೆಯ ಮೇಲೆ ಮುದ್ದಾಗಿ ಕಂಡ ಇಬ್ಬರೂ, ನಿಜಜೀವನದಲ್ಲೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷ ಕೇಳಿಬಂದಿತ್ತು. ಅದೀಗ ನಿಜವಾಗಿದ್ದು, ಡಿಸೆಂಬರ್ನಲ್ಲಿ ಇಬ್ಬರೂ ಮದುವೆಯಾಗುತ್ತಿರುವ ಸುದ್ದಿ ಇದೆ.
ಇದನ್ನೂ ಓದಿ: ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್ ಕಾಯಿಲೆಗೆ ಕಾರಣ ಬಹಿರಂಗ
‘ಶೇರ್ಷಾ’ ಚಿತ್ರದ ನಂತರ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯಾಯಿತು.. ಮೊದಲು ಅವರಿಬ್ಬರೂ ಜತೆಯಾಗಿ ಸಾಕಷ್ಟು ಕಾಣಿಸಿಕೊಂಡಿದ್ದು ಸುದ್ದಿಯಾಯಿತು. ಆ ನಂತರ ಇಬ್ಬರೂ ದೂರಾಗಿದ್ದಾರೆ ಎಂಬ ಗುಸುಗುಸು ಹಬ್ಬಿತು. ಕೊನೆಗೆ, ಇಬ್ಬರೂ ಕಹಿಘಟನೆಗಳನ್ನು ಮರೆತು ಒಂದಾಗಿದ್ದಾರೆ ಎಂದು ಹೇಳಲಾಯಿತು. ಆದರೆ, ಇದ್ಯಾವುದರ ಬಗ್ಗೆಯೂ ಅವರಿಬ್ಬರೂ ತುಟಿಕ್-ಪಿಟಿಕ್ ಎನ್ನಲಿಲ್ಲ.
ಕೆಲವು ತಿಂಗಳುಗಳ ಹಿಂದೆ ಸಿನಿಮಾ ಸಮಾರಂಭವೊಂದರಲ್ಲಿ ಕಿಯಾರಾಗೆ ಪತ್ರಕರ್ತರು ತಮ್ಮ ಖಾಸಗೀ ಜೀವನದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಇದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾನೇನೂ ಮಾತನಾಡದೆ ಇದ್ದರೂ, ನನ್ನ ಬಗ್ಗೆ ಏನೇನೋ ವಿಷಯಗಳು ಕೇಳಿಬರುತ್ತಿರುತ್ತವೆ. ಇನ್ನು ಮಾತನಾಡಿಬಿಟ್ಟರೆ ಏನೇನು ಅನಾಹುತಗಳಾಗುತ್ತವೋ ಗೊತ್ತಿಲ್ಲ. ಹಾಗಾಗಿ, ಸದ್ಯಕ್ಕೆ ಮಾತು ಬೇಡ, ಈ ವಿಷಯದ ಬಗ್ಗೆ ಮಾತನಾಡಬೇಕು ಅಂತನ್ನಿಸಿದಾಗ ನಾನೇ ಖಂಡಿತವಾಗಿಯೂ ಮಾತನಾಡುತ್ತೇನೆ. ಸದ್ಯ ನಾನಂತೂ ನನ್ನ ವೃತ್ತೀಜಿವನ ಹಾಗೂ ಖಾಸಗಿ ಬದುಕು ಎರಡರಲ್ಲೂ ಖುಷಿಯಾಗಿದ್ದೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್ರೂಮ್ನಲ್ಲಿದ್ದ ನಗದು ಕದ್ದ ಕಳ್ಳರು!
ಈಗಿನ ಸುದ್ದಿಯ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಡಿಸೆಂಬರ್ನಲ್ಲಿ ಮದುವೆಯಾಗುತ್ತಿದ್ದಾರಂತೆ. ಎಲ್ಲಿ, ಯಾವಾಗ, ಹೇಗೆ ಮುಂತಾದ ಯಾವ ವಿಷಯಗಳನ್ನೂ ಇಬ್ಬರೂ ಬಹಿರಂಗಗೊಳಿಸಿಲ್ಲ. ಸದ್ಯ ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡು, ಆ ನಂತರ ಮದುವೆಯ ಬಗ್ಗೆ ಅಧಿಕೃತವಾಗಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.