ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸದ್ಯ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ನಿರೀಕ್ಷೆಯಂತೆ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರನ್ನು ಕೈ ಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ಆಟಗಾರರು ಬಿಸಿಸಿಐ ಮಾತನ್ನು ದಿಕ್ಕಿರಿಸಿದ ಪರಿಣಾಮ ವಾರ್ಷಿಕ ಒಪ್ಪಂದದಿಂದ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ತಂಡದಲ್ಲಿದ್ದ ಇಶಾನ್ ಕಿಶನ್ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ಮರಳಿದ್ದರು. ಆ ನಂತರ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ, ಬಿಸಿಸಿಐ ಮಾತನ್ನು ದಿಕ್ಕರಿಸಿದ್ದ ಇಶಾನ್ ತಮ್ಮ ತವರು ತಂಡವನ್ನು ಕೂಡಿಕೊಂಡಿರಲಿಲ್ಲ.
ಇದನ್ನೂ ಓದಿ: ಆಂಗ್ಲರ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ?
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಆಡಿದ್ದ ಶ್ರೇಯಸ್ ಅಯ್ಯರ್ ಗಾಯಗೊಂಡ ಪರಿಣಾಮ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಗುಣಮುಖರಾದ ಬಳಿಕ ಶ್ರೇಯಸ್ಗೂ ರಣಜಿ ಆಡುವಂತೆ ಹೇಳಲಾಗಿತ್ತು. ಆದರೆ ಅಯ್ಯರ್ ಬಿಸಿಸಿಐ ಆದೇಶವನ್ನು ದಿಕ್ಕರಿಸಿದ ಪರಿಣಾಮ ಶ್ರೇಯಸ್ ಅಯ್ಯರ್ಗೂ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್ ನೀಡಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಬಿಸಿಸಿಐ ಪ್ರತಿ ವರ್ಷ 12 ತಿಂಗಳ ಒಪ್ಪಂದವನ್ನು ನೀಡುತ್ತದೆ. ಅದರ ಅಡಿಯಲ್ಲಿ ಆಯ್ಕೆಯಾದ ಆಟಗಾರರು ಆ ವರ್ಷದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಿ ಅಥವಾ ಇಲ್ಲದಿರಲಿ ಅವರು ನಿಗದಿತ ಮೊತ್ತವನ್ನು ಪಡೆಯುತ್ತಾರೆ. ಅದರಂತೆ ಬಿಸಿಸಿಐ ಆಟಗಾರರನ್ನು A+, A, B, ಮತ್ತು C ಗ್ರೇಡ್ಗಳಾಗಿ ವಿಂಗಡಿಸುತ್ತದೆ. A+ ಗ್ರೇಡ್ ಪಡೆಯುವ ಆಟಗಾರ ವರ್ಷಕ್ಕೆ 7 ಕೋಟಿ ರೂಪಾಯಿ, A ಗ್ರೇಡ್ನಲ್ಲಿರುವ ಆಟಗಾರರು 5 ಕೋಟಿ ರೂ., ಬಿ ಗ್ರೇಡ್ನಲ್ಲಿರುವ ಆಟಗಾರರು 3 ಕೋಟಿ ಮತ್ತು ಸಿ ದರ್ಜೆಯ ಆಟಗಾರರು ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಗ್ರೇಡ್ A+ : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ A: ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ B : ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ C: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್.