ಶಿವಮೊಗ್ಗ: ವರ್ಷದ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿದ್ದ ಗೃಹಿಣಿಯೊಬ್ಬಳು ಗಾಡಿಕೊಪ್ಪದ ಬಾಡಿಗೆ ಮನೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗ ತಾಲೂಕಿನ ಆಯನೂರು ತಾಂಡದ ಮೋನಿಕಾ (20) ಮೃತ ಗೃಹಿಣಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ, ಕೊನಗವಳ್ಳಿಯ ಚಂದನ್ ಎಂಬಾತನನ್ನು ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ ?
ಆಯನೂರು ತಾಂಡದ ಶಂಕರ ನಾಯ್ಕ ಅವರ ಪುತ್ರಿ ಮೋನಿಕಾ ಮತ್ತು ಕೊನಗವಳ್ಳಿಯ ಗೋಪಾಲನಾಯ್ಕ ಎಂಬುವರ ಪುತ್ರ ಚಂದನ್ ವರ್ಷದ ಹಿಂದೆ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿದ್ದರು. ಗಾಡಿಕೊಪ್ಪದ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಳಿ ದಂಪತಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಚಂದನ್ ಪೈಂಟರ್ ಆಗಿದ್ದು ಆರಂಭದ ಮೂರ್ನಾಲ್ಕು ತಿಂಗಳು ಸಂಸಾರ ಚೆನ್ನಾಗಿಯೇ ನಡೆದಿತ್ತು. ಆನಂತರ ದಾಂಪತ್ಯದಲ್ಲಿ ವಿರಸ ಉಂಟಾಗಿ ಜಗಳಕ್ಕೆ ಎಡೆಮಾಡಿಕೊಟ್ಟಿತ್ತು. ಈ ನಡುವೆ ಮೋನಿಕಾಗೆ ವರದಕ್ಷಿಣೆ ಕಿರುಕುಳ ಕೂಡ ನೀಡಲಾರಂಭಿಸಿದ್ದ. ತನ್ನ ಅಂತಸ್ಥಿಗೆ ತಕ್ಕಂತೆ ಇಲ್ಲ ಎಂದು ಚಂದನ್ ಮತ್ತು ಆತನ ಕುಟುಂಬಸ್ಥರು ಮೋನಿಕಾಳನ್ನು ಕೊಲೆ ಮಾಡಿದ್ದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಂದನ್ ಸೀರೆಯಿಂದ ಮೋನಿಕಾಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನೇಣುಹಾಕಿದ್ದಾನೆ ಎಂದು ಮೃತಳ ಪಾಲಕರು ಆರೋಪ ಮಾಡಿದ್ದಾರೆ.