More

    ಹಿರಿಯ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಗೌರವ; ಪತ್ರಕರ್ತರು ಉತ್ಪ್ರೇಕ್ಷೆ ಸುದ್ದಿ ಮಾಡುವುದನ್ನು ಬಿಡಿ: ದೇವನಾಥ್​​​​

    ಬೆಂಗಳೂರು: ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮೂವರು ಹಿರಿಯ ಪತ್ರಕರ್ತರನ್ನು ಗೌರವಿಸಿತು.

    ಕ್ರೀಡಾ ಕ್ಷೇತ್ರದ ವರದಿಯಲ್ಲಿ ದ್ರೋಣಾಚಾರ್ಯ ಎಂದೇ ಕರೆಸಿಕೊಳ್ಳುವ ಎಂಬತ್ತೊಂದು ವಸಂತ ತುಂಬಿದ ಹಿರಿಯ ಪತ್ರಕರ್ತ ದೇವನಾಥ್, ಹಿರಿಯ ಪತ್ರಕರ್ತರ ವೇದಿಕೆಯ ಸಂಸ್ಥಾಪಕ ಮತ್ತು ಎಂಬತ್ತೈದು ವಸಂತ ತುಂಬಿದ ಬಾಲ ಭಾಸ್ಕರ್, ಎಪ್ಪತ್ತಾರು ವಸಂತ ತುಂಬಿದ ಜಿ. ಅಶ್ವಥ್ ಅವರನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿ ಮಾತನಾಡಿದರು. ‘ಪ್ರಜಾವಾಣಿ, ತಾಯ್ನಾಡು, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ ದೇವನಾಥ್ ತಮ್ಮ ವೃತ್ತಿ ಜೀವನದಲ್ಲಿ ಆದರ್ಶಪ್ರಾಯರಾಗಿ ನಡೆದುಕೊಂಡಿರುವುದು ಯುವ ಪತ್ರಕರ್ತರಿಗೆ ಬೆಳಕಾಗಬೇಕು..’ ಎಂದರು.

    ಪ್ರೂಫ್ ರೀಡರ್ ಆಗಿ ಕೆಲಸ ಪ್ರಾರಂಭಿಸಿದ ಬಾಲ ಭಾಸ್ಕರ್​​​ ಬಗ್ಗೆ ಮಾತನಾಡಿದ ಶಿವಾನಂದ ತಗಡೂರು, ‘ಬಾಲ ಭಾಸ್ಕರ್​​​ ನೆಟ್ಟಕಲ್ಲಪ್ಪ ಅವರ ಜೊತೆಗೂ ಅವಿನಾಭಾವ ಸಂಬಂಧ ಹೊಂದಿದವರು, ಹಿರಿಯ ಪತ್ರಕರ್ತರ ಸಮಸ್ಯೆ ಪರಿಹರಿಸಲು ಪ್ರತ್ಯೇಕವಾದ ವೇದಿಕೆ ಹುಟ್ಟಲು ಕಾರಣಕರ್ತರಾಗಿದ್ದಾರೆ, ಮತ್ತೊಬ್ಬ ಪತ್ರಕರ್ತ ಅಶ್ವಥ್ ಅವರು ಖಾದ್ರಿ ಶಾಮಣ್ಣ ಅವರ ಒಡನಾಡಿಯಾಗಿದ್ದರು..’ ಎಂದರು.

    ಈ ಸಂದರ್ಭದಲ್ಲಿ ಮೂವರು ಹಿರಿಯ ಪತ್ರಕರ್ತರನ್ನು ಅಭಿನಂದಿಸಿ ಮಾತನಾಡಿದ ಪ್ರೆಸ್ ಕ್ಲಬ್ ಮತ್ತು ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಪೊನ್ನಪ್ಪ ಅವರು, ‘ಸುದ್ದಿಮನೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕೆಯುಡಬ್ಲ್ಯೂಜೆ ಕಾರ್ಯ ಶ್ಲಾಘನೀಯ, ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು..’ ಸಲಹೆ ನೀಡಿದರು.

    ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಮಾತನಾಡಿ, ‘ಕಾರ್ಯನಿರತ ಪತ್ರಕರ್ತರ ಸಂಘವನ್ನು ವೃತ್ತಿಪರವಾಗಿ ರೂಪಿಸಿ, ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಶಿವಾನಂದ ತಗಡೂರು ನೇತೃತ್ವದ ತಂಡ..’ ಎಂದು ಹೇಳಿ, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಕೋವಿಡ್ ಕಾಲ ಘಟ್ಟದಿಂದ ಹಿಡಿದು ಈತನಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಬಗ್ಗೆ ವಹಿಸಿರುವ ಕಾಳಜಿ ಅನನ್ಯವಾದುದು ಎಂದರು.

    ಇದೇ ಸಂದರ್ಭದಲ್ಲಿ ದೇವನಾಥ್ ಅವರು, ತಮ್ಮನ್ನು ಪತ್ರಕರ್ತರನ್ನಾಗಿ ರೂಪಿಸಿದವರ ಸಹಕಾರಗಳನ್ನು ನೆನೆದರು. ಕೆಯುಡಬ್ಲ್ಯೂಜೆ ಗೌರವ ಸ್ವೀಕಾರ ಮಾಡಿದವರ ಪರ ಮಾತನಾಡಿದ ದೇವನಾಥ್, ‘ಇಂದಿನ ಕಾಲಘಟ್ಟದಲ್ಲಿ ಉತ್ಪ್ರೇಕ್ಷೆಯಿಂದ ಸುದ್ದಿ ಮಾಡುವ ತವಕ ಹೆಚ್ಚಾಗಿದ್ದು, ಇದು ಪತ್ರಿಕೋದ್ಯಮಕ್ಕೆ ಆಶಾದಾಯಕ ಬೆಳೆವಣಿಗೆ ಅಲ್ಲ. ವಸ್ತುನಿಷ್ಠ ವರದಿಯನ್ನು ನೀಡುವುದಷ್ಟೆ ಪತ್ರಕರ್ತರ ಆದ್ಯತೆ ಆಗಬೇಕು..’ ಎಂದು ಕರೆ ನೀಡಿದರು.

    ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸೋಮಶೇಖರ್ ಗಾಂಧಿ, ಪ್ರೆಸ್ ಕ್ಲಬ್ ನಿರ್ದೇಶಕ ಸೋಮಶೇಖರ್, ಹಿರಿಯ ಪತ್ರಕರ್ತೆ ಶಾಂತಕುಮಾರಿ ಮಾತನಾಡಿದರು.

    ಈ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಜುಕ್ರಿಯ, ಖಜಾಂಚಿ ಶಿವರಾಜು, ಚಿಕ್ಕಬಳ್ಳಾಪುರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಮಲತೇಶ ಅರಸು, ಚಿತ್ರದುರ್ಗದ ಗೋವಿಂದಪ್ಪ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts