ಮುಂಬೈ: ಭಾರತ ತಂಡ 2011ರಲ್ಲಿ ಸಚಿನ್ ತೆಂಡುಲ್ಕರ್ಗಾಗಿ ಏಕದಿನ ವಿಶ್ವಕಪ್ ಗೆಲುವಿನ ಸಂಕಲ್ಪ ಮಾಡಿತ್ತು. ಅದೇ ರೀತಿ ಈ ಬಾರಿ ವಿರಾಟ್ ಕೊಹ್ಲಿಗಾಗಿ ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದು ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
“ಕೊಹ್ಲಿ ಈಗ ಭಾರತ ತಂಡದಲ್ಲಿ ಸ್ಥಾನ ಅವರಂಥದ್ದೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಯಾವಾಗಲೂ ತಂಡಕ್ಕೆ ಶೇ. 100ಕ್ಕಿಂತ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತಾರೆ. ಕೊಹ್ಲಿ ಕೂಡ ಈ ಬಾರಿ ವಿಶ್ವಕಪ್ ಗೆಲ್ಲಲು ಬಯಸಿದ್ದಾರೆ. ಅವರು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ’ ಎಂದು ಮುಂಬೈನಲ್ಲಿ ನಡೆದ ವಿಶ್ವಕಪ್ ವೇಳಾಪಟ್ಟಿ ಅನಾವರಣ ಕಾರ್ಯಕ್ರಮದಲ್ಲಿ ಸೆಹ್ವಾಗ್ ಹೇಳಿದ್ದಾರೆ.
ವಿಶ್ವಕಪ್ನಲ್ಲಿ ಅಕ್ಟೋಬರ್ 15ರಂದು ಪಾಕಿಸ್ತಾನ ವಿರುದ್ಧ ಅಹಮದಾಬಾದ್ನಲ್ಲಿ ಆಡಲಿರುವ ಭಾರತ ತಂಡ ಗೆಲುವಿನ ನೆಚ್ಚಿನ ತಂಡವೂ ಆಗಿರಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. “ಭಾರತ ತಂಡ ಒತ್ತಡವನ್ನು ನಿಭಾಯಿಸಬಲ್ಲುದು. ಇದೇ ವೇಳೆ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಗೆಲ್ಲದ ಒತ್ತಡವಿದೆ. 1990ರಲ್ಲಿ ಭಾರತವೂ ಒತ್ತಡಕ್ಕೆ ಒಳಗಾಗುತ್ತಿತ್ತು. ಆದರೆ 2000ದ ನಂತರ ಭಾರತ ಒತ್ತಡವನ್ನು ನಿಭಾಯಿಸಲು ಕಲಿತಿದೆ’ ಎಂದು ಸೆಹ್ವಾಗ್ ಹೇಳಿದ್ದಾರೆ. ಭಾರತ, ಇಂಗ್ಲೆಂಡ್, ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ಟೂರ್ನಿಯಲ್ಲಿ ಉಪಾಂತ್ಯಕ್ಕೇರಬಲ್ಲ ನೆಚ್ಚಿನ ತಂಡಗಳು ಎಂದು ಸೆಹ್ವಾಗ್ ಹೆಸರಿಸಿದ್ದಾರೆ.
ಸಮಾರಂಭದಲ್ಲಿ ಹಾಜರಿದ್ದ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ವಿಶ್ವಕಪ್ನಲ್ಲಿ ಸ್ಪಿನ್ನರ್ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದ ಬಗ್ಗೆ ನನಗೆ ಕುತೂಹಲವಿದೆ. ತವರಿನ ವಾತಾವರಣದ ಅನುಕೂಲ ಹೊಂದಿರುವ ಭಾರತ ಟೂರ್ನಿಯ ನೆಚ್ಚಿನ ತಂಡವಾಗಿದೆ ಎಂದ ಮುರಳೀಧರನ್, ಇಂಗ್ಲೆಂಡ್ನ ಆದಿಲ್ ರಶೀದ್ ಟೂರ್ನಿಯಲ್ಲಿ ಅತ್ಯಂತ ಯಶ ಕಾಣಲಿರುವ ಬೌಲರ್ ಎಂದು ಭವಿಷ್ಯ ನುಡಿದಿದ್ದಾರೆ.
ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಜಾಗತಿಕ ಕ್ರಿಕೆಟ್ ಟೂರ್ನಿ ವಿವರ…