ಪಟ್ನಾ: ಕರೊನಾ ವೈರಸ್ ಭೀತಿಯ ನಡುವೆಯೇ ದೇಶದಲ್ಲಿ ಮುಂಗಾರು ಮಳೆ ಅನಾಹುತಗಳನ್ನೇ ಸೃಷ್ಟಿಸಿ ಕಾಲಿಟ್ಟಿದೆ.
ಬಿಹಾರದ ಪಟ್ನಾದಲ್ಲಿ ಸುರಿದ ಧಾರಾಕಾರ ಮಳೆ 83 ಮಂದಿಯನ್ನು ಬಲಿ ಪಡೆದಿದೆ. ಕಳೆದೆರಡು ದಿನಗಳಿಂದ ಸಿಡಿಲಿನ ಬಡಿತವೂ ಹೆಚ್ಚಾಗಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ಸಾವಿನ ಪ್ರಮಾಣ ಇನ್ನೂ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.
23 ಜಿಲ್ಲೆಗಳಲ್ಲಿ ಭಾರಿ ಅನಾಹುತ ಉಂಟಾಗಿದ್ದು, ಗೋಪಾಲ್ಗಂಜ್ನಲ್ಲಿ 13 ಮಂದಿ, ಮಧುಬನಿ ಮತ್ತು ನವಾಡಾದಲ್ಲಿ ತಲಾ 8, ಬಾಗಲ್ಪುರ ಮತ್ತು ಸಿವಾನ್ನಲ್ಲಿ ತಲಾ 6, ದರ್ಬಂಗಾ, ಬಂಕಾ, ಪೂರ್ವ ಚಂಪಾರನ್ನಲ್ಲಿ ತಲಾ 5 ಮತ್ತು ಖಗರಿಯಾ ಮತ್ತು ಔರಂಗಾಬಾದ್ನಲ್ಲಿ ತಲಾ 3 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ನೀರಾವರಿ ಭೂಮಿಗಿಲ್ಲ ವರಿ
ಸಿಡಿಲಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಚಿಕಿತ್ಸೆ ಮುಂದುವರೆದಿದೆ. ಘಟನೆ ವೇಳೆ ಮನೆ ಹಾಗೂ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಡಿಲಿನಿಂದ ಅನೇಕ ಮನೆಗಳು ಜಖಂಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೊಂಡಿವೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲೂ ಕೂಡ ಸಿಡಿಲು ಬಡಿದು 24 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ವರದಿ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮೃತರ ಕುಟುಂಬಗಳಿಗೆ ಟ್ವೀಟ್ ಮೂಲಕ ಸಂತಾಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿಯೂ ಧಾರಾಕಾರ ಮಳೆ ಸುರಿದಿದೆ.