ಲಖನೌ: ಕಳೆದ ಕೆಲವು ದಿನಗಳಿಂದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಜ್ಯೋತಿ ಮೌರ್ಯ ಬಹಳ ಸುದ್ದಿಯಲ್ಲಿದ್ದಾರೆ. ನನ್ನ ದುಡಿಮೆಯಲ್ಲಿ ಎಸ್ಡಿಎಂ ಆದ ಬಳಿಕ ನನ್ನೊಂದಿಗೆ ದೂರವಾಗಿ ಅಧಿಕಾರಿಯೊಬ್ಬರ ಜತೆ ಸಂಬಂಧ ಹೊಂದಿದ್ದಾರೆ ಎಂದು ಜ್ಯೋತಿ ಮೌರ್ಯ ವಿರುದ್ಧ ಅವರ ಪತಿ ಅಲೋಕ್ ಮೌರ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಜ್ಯೋತಿ ಮೌರ್ಯರ ಬಾಯ್ಫ್ರೆಂಡ್ ಮನೀಶ್ ದುಬೆ ಅಮಾನತು ಆಗುವ ಸಾಧ್ಯತೆ ಇದೆ.
ಅಮಾನತಿಗೆ ಶಿಫಾರಸು
ಮನೀಶ್ ದುಬೆ ಹೋಮ್ಗಾರ್ಡ್ ಜಿಲ್ಲಾ ಕಮಾಂಡೆಂಟ್ ಆಗಿದ್ದಾರೆ. ಅಲೋಕ್ ಮೌರ್ಯ ಆರೋಪದ ಬಳಿಕ ಮನೀಶ್ ದುಬೆ ವಿರುದ್ಧ ವಿಭಾಗೀಯ ತನಿಖೆ ನಡೆಸಲಾಯಿತು. ಇದರಲ್ಲಿ ದುಬೆ ತಪ್ಪು ಮಾಡಿರುವುದು ಸಾಬೀತಾಗಿದ್ದು, ವಿಭಾಗದ ಕಳಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮನೀಶ್ ದುಬೆ ಅವರನ್ನು ಹುದ್ದೆಯಿಂದ ಅಮಾನತು ಮಾಡಲು ತನಿಖಾಧಿಕಾರಿಗಳು ಶಿಫಾರಸು ಮಾಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಡಬಲ್ ಮರ್ಡರ್ ಮಾಡಿ ಸುದ್ದಿಯನ್ನೇ ಸ್ಟೇಟಸ್ನಲ್ಲಿ ಶೇರ್ ಮಾಡಿದ ಜೋಕರ್ ಫೆಲಿಕ್ಸ್!
ಮನೀಶ್ ದುಬೆ ಅವರನ್ನು ಘಾಜಿಯಬಾದ್ ಜಿಲ್ಲೆಗೆ ಹೋಮ್ಗಾರ್ಡ್ ಕಮಾಂಡೆಂಟ್ ಆಗಿ ನೇಮಿಸಲಾಗಿದೆ. ಮನೀಶ್ ಜತೆ ಜ್ಯೋತಿ ಮೌರ್ಯ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಕೆಯ ಪತಿ ಅಲೋಕ್ ಮೌರ್ಯ ಆರೋಪಿಸಿದ ಬಳಿಕ ಮನೀಶ್ ಅವರ ಹೆಸರು ಮುನ್ನೆಲೆಗೆ ಬಂದಿತು. ಅಲ್ಲದೆ, ಜ್ಯೋತಿ ಮೌರ್ಯ ಜತೆ ಮನೀಶ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು
ಮನೀಶ್ ಮತ್ತು ಜ್ಯೋತಿ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್ ಚಾಟ್ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ವಿವಾದ ದೊಡ್ಡದಾಯಿತು. ಅಲ್ಲದೆ, ಸರಸ ಸಲ್ಲಾಪದಲ್ಲಿ ಇಬ್ಬರು ತೊಡಗಿದ್ದಾಗ 2020ರಲ್ಲಿ ಇಬ್ಬರನ್ನು ರೆಡ್ಹ್ಯಾಂಡ್ ಆಗಿಯೇ ಹಿಡಿದಿದ್ದೆ ಎಂದು ಅಲೋಕ್ ಮೌರ್ಯ ಹೇಳಿದ್ದಾರೆ.
ಡಿಜಿಗೆ ವರದಿ ಸಲ್ಲಿಕೆ
ಈ ಪ್ರಕರಣ ಸಂಬಂಧ ವಿಭಾಗೀಯ ಮಟ್ಟದಲ್ಲಿ ತನಿಖೆ ಆರಂಭಿಸಲಾಗಿದೆ. ಹೋಮ್ಗಾರ್ಡ್ ಡಿಐಜಿ ಸಂತೋಷ್ ಸಿಂಗ್ ತನಿಖಾ ವರದಿಯನ್ನು ಹೋಮ್ಗಾರ್ಡ್ ಡಿಜಿ ಬಿಕೆ ಮೌರ್ಯ ಅವರಿಗೆ ಸಲ್ಲಿಸಿದ್ದಾರೆ. ಜ್ಯೋತಿ ಮೌರ್ಯ ಜತೆಗಿನ ತನ್ನ ಸಂಬಂಧದಿಂದ ವಿಭಾಗಕ್ಕೂ ಕಳಂಕ ತಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದು, ಅಮಾನತಿ ಶಿಫಾರಸು ಮಾಡಲಾಗಿದೆ.
ಘಟನೆ ಹಿನ್ನೆಲೆ ಏನು?
ಜ್ಯೋತಿ ಮೌರ್ಯ ಮತ್ತು ಅಲೋಕ್ 2010ರಲ್ಲಿ ಮದುವೆ ಆದರು. ಆ ಸಮಯದಲ್ಲಿ ಅಲೋಕ್ ಪಂಚಾಯತ್ ರಾಜ್ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಜ್ಯೋತಿ ಓದು ಮುಂದುವರಿಸುವ ಬಯಕೆಯನ್ನು ಗಂಡನ ಬಳಿ ವ್ಯಕ್ತಪಡಿಸಿದ್ದರು. ಬಳಿಕ ಅಲೋಕ್ ಕೂಡ ಇದಕ್ಕೆ ಓಕೆ ಎಂದಿದ್ದರು. ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದೆ. ತನ್ನ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು. ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು ಎಂದು ಅಲೋಕ್ ಆರೋಪಿಸಿದ್ದಾರೆ.
2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ದಾಖಲಿಸಿದರು. ಫಾರ್ಚೂನರ್ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಜ್ಯೋತಿ ಉಲ್ಲೇಖಿಸಿದ್ದರು. ಅಲ್ಲದೆ, ಗಂಡನನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಅಲೋಕ್ ಕಣ್ಣೀರಿಟ್ಟಿದ್ದಾರೆ.
ಜ್ಯೋತಿ ಮೌರ್ಯ ಪ್ರತಿಕ್ರಿಯೆ ಏನು?
ಜ್ಯೋತಿ, ತನ್ನ ಗಂಡನಿಂದ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮೊಬೈಲ್ ಫೋನ್ ಅನ್ನು ಗಂಡ ಹ್ಯಾಕ್ ಮಾಡಿದ್ದಾನೆ ಎಂದು ಆರೋಪ ಮಾಡಿರುವ ಜ್ಯೋತಿ, ದಾಂಪತ್ಯ ದ್ರೋಹದ ಕುರಿತು ಸುಳ್ಳು ಸಾಕ್ಷಿಗಳನ್ನು ರಚಿಸಿದ್ದಾರೆ ಎಂದು ದೂರಿದ್ದಾರೆ. ಮದುವೆಗು ಮುನ್ನ ತನ್ನನ್ನು ತಾನು ಗ್ರಾಮ ಪಂಚಾಯಿತಿ ಅಧಿಕಾರಿ ಎಂದು ಪರಿಚಯಿಸಿಕೊಂಡ. ಆದರೆ, ಆತ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಸ ಗುಡಿಸುವ ವರ್ಗ-4ರ ಉದ್ಯೋಗಿ ಆಗಿದ್ದಾರೆ. ಈ ಪ್ರಕರಣ ಗಂಡ-ಹೆಂಡತಿ ನಡುವಿನ ವಿವಾದ ಹೊರತು, ಎಸ್ಡಿಎಂ, ಸ್ವೀಪರ್ ನಡುವೆ ಜಟಾಪಟಿ ಅಲ್ಲ. ಅವರು ಸ್ವೀಪರ್ ಎಂಬುದು ನನಗೆ ಸಮಸ್ಯೆಯೇ ಅಲ್ಲ ಎಂದು ಹೇಳಿದ ಜ್ಯೋತಿ, ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಇದನ್ನೂ ಓದಿ: ಶಾಪಿಂಗ್ಗೆಂದು ಅಪರಿಚಿತ ವಕೀಲನ ಬಳಿ 1 ಲಕ್ಷ ರೂ. ಕೇಳಿದ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್ನಿಂದ ಹಲ್ಲೆ
ಮುಂದಿನ ನಡೆ ಏನು ಎಂಬುದಕ್ಕೆ ಪ್ರತಿಕ್ರಿಯಿಸಿದ ಜ್ಯೋತಿ, ಸದ್ಯ ನನ್ನ ಪ್ರಕರಣ ಕೋರ್ಟಿನಲ್ಲಿದೆ. ನನ್ನ ಹೇಳಿಕೆಯನ್ನು ನಾನು ಕೋರ್ಟಿನಲ್ಲಿ ತಿಳಿಸುತ್ತೇನೆ ಎಂದರು. ಇದೇ ವೇಳೆ ಹೋಮ್ ಗಾರ್ಡ್ ಕಮಾಂಡೆಂಟ್ ಮನೀಶ್ ದುಬೆ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಜ್ಯೋತಿ ಮೌರ್ಯ, ಇದು ನನ್ನ ವೈಯಕ್ತಿಕ ವಿಚಾರ ಎಂದು ಮತ್ತೆ ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್)
ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ ಗಿಟ್ಟಿಸಿ ದಾಂಪತ್ಯ ದ್ರೋಹ ಆರೋಪ: ಮೌನ ಮುರಿದ ಜ್ಯೋತಿ ಮೌರ್ಯ
ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ, ಬಾಯ್ಫ್ರೆಂಡ್ ಜತೆ ಸರಸ: ಮಹಿಳಾಧಿಕಾರಿಯ ವಾಟ್ಸ್ಆ್ಯಪ್ ಚಾಟ್ ವೈರಲ್
ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ ಗಿಟ್ಟಿಸಿ ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ದ ಮಹಿಳಾಧಿಕಾರಿಯ ಹಳೇ ಹೇಳಿಕೆ ವೈರಲ್!