ನವದೆಹಲಿ: ಕೋವಿಡ್ 19 ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಆರಂಭದ ಹಂತದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಳ್ಳುವ ಕಾರಣ ಸಾಲ ಮರುಪಾವತಿಗೂ ವಿನಾಯಿತಿ ಘೋಷಿಸಿತ್ತು. ಆರಂಭದಲ್ಲಿ ಮಾರ್ಚ್- ಮೇ ತನಕ, ನಂತರ ಸೆಪ್ಟೆಂಬರ್ ತನಕ ಇದನ್ನು ವಿಸ್ತರಿಸಿದೆ. ಅಲ್ಲದೆ, ಮೊರಟೋರಿಯಂಗೆ ಸಂಬಂಧಿಸಿದ ಎಲ್ಲ ನಿರ್ಧಾರವನ್ನೂ ಬ್ಯಾಂಕುಗಳಿಗೇ ಬಿಟ್ಟಿತ್ತು. ಹೀಗಾಗಿ ಬ್ಯಾಂಕುಗಳು ಸಾಲ ಮರುಪಾವತಿಗೆ ವಿನಾಯಿತಿ ಘೋಷಿಸಿದರೂ, ಈ ಅವಧಿಯ ಬಡ್ಡಿಯನ್ನೂ ಅಸಲಿಗೆ ಸೇರಿಸಿ ಬಡ್ಡಿ ವಿಧಿಸುವ ಕ್ರಮವನ್ನು ತೆಗೆದುಕೊಂಡವು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಆರ್.ಷಾ ಅವರನ್ನು ಒಳಗೊಂಡ ಪೀಠ ಬುಧವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ವಾದ-ಪ್ರತಿವಾದಗಳನ್ನು ಆಲಿಸುತ್ತಿದ್ದ ನ್ಯಾಯಪೀಠ, ಕೋವಿಡ್ ಸಂಕಷ್ಟದಿಂದ ಪಾರಾಗುವ ಸಲುವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಪರಿಣಾಮ ನೇರ ಜನರ ಆರ್ಥಿಕ ಸ್ಥಿತಿಗತಿ ಮೇಲಾಗುವ ಕಾರಣ ಮೊರಟೋರಿಯಂ ಘೋಷಿಸಿದೆ. ಈ ನಿರ್ಧಾರದ ಹಿಂದಿನ ಉದ್ದೇಶ ಈಡೇರುತ್ತಿದೆಯೇ ಎಂಬುದನ್ನು ಸರ್ಕಾರ ಗಮನಿಸಬೇಕಲ್ಲವೇ? ಎಲ್ಲವನ್ನೂ ಬ್ಯಾಂಕುಗಳ ನಿರ್ಧಾರಕ್ಕೆ ಬಿಡುವುದು ಸರಿಯೇ? ಈಗ ಬಡ್ಡಿ ಮೇಲೆ ಬಡ್ಡಿ ವಿಧಿಸುತ್ತಿರುವ ಬ್ಯಾಂಕುಗಳ ನಿರ್ಧಾರಕ್ಕೆ ಯಾವುದೇ ತಳಹದಿ ಇದ್ದಂತೆ ಕಾಣುತ್ತಿಲ್ಲ. ಸರ್ಕಾರ ಈ ವಿಷಯವಾಗಿ ಮಧ್ಯಪ್ರವೇಶಿಸುವುದು ಅವಶ್ಯ ಎಂಬ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಇದನ್ನೂ ಓದಿ: 1,000 ರೂಪಾಯಿ ಬಾಡಿಗೆಗೆ ಬಡವರಿಗೆ ಮನೆ – ಮೋದಿ ಸರ್ಕಾರದ ಯೋಜನೆ
ಆಗ್ರಾ ನಿವಾಸಿ ಗಜೇಂದ್ರ ಶರ್ಮಾ ಅವರು ಸಲ್ಲಿಸಿದ್ದ ದೂರು ಅರ್ಜಿಯಲ್ಲಿ ಆರ್ಬಿಐ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆ ವಿಚಾರ ಪ್ರಸ್ತಾಪಿಸಿದ್ದು ಜನರಿಗಾಗುತ್ತಿರುವ ಹಲವು ತೊಂದರೆಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದು, ಬ್ಯಾಂಕುಗಳಲ್ಲಿ 133 ಲಕ್ಷ ಕೋಟಿ ರೂಪಾಯಿ ಠೇವಣಿ ಇದೆ. ಅವುಗಳಿಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಬಡ್ಡಿ ವಿನಾಯಿತಿ ನೀಡಿದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ದಿನದ ಕಲಾಪದಲ್ಲಿ ವಿಚಾರಣೆಯನ್ನು ಕೊನೆಗೊಳಿಸುವ ಮುನ್ನ ನ್ಯಾಯಪೀಠವು, ಪರಿಸ್ಥಿತಿಯನ್ನು ಅವಲೋಕಿಸುವಂತೆ ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ಸೂಚಿಸಿತು. ಅಲ್ಲದೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ಗೂ ಮೊರಟೋರಿಯಂ ವಿಚಾರವಾಗಿ ಪರಿಶೀಲಿಸುವಂತೆ ಹೇಳಿ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿತು. (ಏಜೆನ್ಸೀಸ್)
ಸಾಲ ಮರುಪಾವತಿಗೆ ವಿನಾಯಿತಿ ತಗೊಳ್ತೀರಾ?- ಹೆಚ್ಚಿನ ಬಡ್ಡಿ ಪಾವತಿಸುವುದಕ್ಕೆ ಸಿದ್ಧರಾಗಿ..