ನವದೆಹಲಿ: ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಒಲವು ತೋರಿದೆ. ಎಸ್ಎಂಎಸ್, ವಾಟ್ಸ್ಆ್ಯಪ್, ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸುವ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಲವು ತೋರಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಈ ಬಗ್ಗೆ ಎಲ್ಲ ಹೈಕೋರ್ಟ್ ಮತ್ತು ರಾಜ್ಯ ಡಿಜಿಪಿಗಳಿಂದ ಪ್ರತಿಕ್ರಿಯೆಯನ್ನು ಬಯಸಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ನ್ಯಾಯಪೀಠ ಕ್ರಿಮಿನಲ್ ವಿಚಾರಣೆಗಳಲ್ಲಿರುವ ಕೊರತೆಗಳನ್ನು ನಿವಾರಿಸುವುದು ಮತ್ತು ಕ್ರಿಮಿನಲ್ ಕೇಸ್ಗಳ ವಿಚಾರಣೆಯಲ್ಲಿ ಪ್ರಗತಿಯನ್ನು ಖಾತರಿಪಡಿಸುವುದಕ್ಕಾಗಿ ಸಾಧ್ಯವಿರುವ ವಿವಿಧ ಕ್ರಮಗಳನ್ನು ಪರಿಶೀಲಿಸುತ್ತಿದ್ದ ವೇಳೆ ಕೋರ್ಟ್ ಈ ಸೂಚನೆ ನೀಡಿದೆ.
ಇದನ್ನೂ ಓದಿ: ರಕ್ಷಣಾ ಸಂಬಂಧಕ್ಕೆ ಬಲ: ಭಾರತ-ಅಮೆರಿಕ ನಡುವೆ 2+2 ಸಭೆ, ಮಹತ್ವದ ನಿರ್ಧಾರ
ಚೆಕ್ಬೌನ್ಸ್ ಕೇಸ್ ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿ ಸಮನ್ಸ್ ಜಾರಿಗೊಳಿಸುವುದಕ್ಕೆ ಡಿಜಿಟಲ್ ಪ್ಲಾಟ್ಫಾರಂ ಬಳಸುವುದಕ್ಕೆ ಅಮಿಕಸ್ ಕ್ಯೂರಿಯೂ ಆಗಿರುವ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ಕೆ.ಪರಮೇಶ್ವರ್ ಸಲ್ಲಿಸಿದ್ದ ವರದಿಯನ್ನು ಗಮನಿಸಿ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಪೀಠ, ಹೈಕೋರ್ಟ್ ಮತ್ತು ರಾಜ್ಯಗಳ ಡಿಜಿಪಿಗಳಿಗೆ ಸೂಚಿಸಿದೆ. (ಏಜೆನ್ಸೀಸ್)