ಚಿತ್ರದುರ್ಗ: ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿವೃತ್ತಿ ಜೀವನ ಸುಖವಾಗಿ ಕಳೆಯುವಂತೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ನಿವೃತ್ತ ನೌಕರರಿಗೆ ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿವೃತ್ತ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾಯಿಲೆಗಳಿಗೆ ತುತ್ತಾಗದೆ ಉತ್ತಮ ಜೀವನಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು. ನ್ಯಾಯಮೂರ್ತಿಯಾಗಿ ಕರ್ತವ್ಯದಲ್ಲಿದ್ದಾಗ ಸಾರ್ವತ್ರಿಕವಾಗಿ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ನಿವೃತ್ತಿ ನಂತರ ಎಲ್ಲರೊಂದಿಗೆ ಬೆರೆಯುವ ಖುಷಿ ನನಗೆ ಸಿಕ್ಕಿದೆ ಎಂದರು.
ಸೇವೆಯಿಂದ ನಿವೃತ್ತಿಯಾದೆ ಎಂಬ ಬೇಸರ ಬೇಡ. ನೌಕರಿಯಲ್ಲಿದ್ದಾಗ ಎಲ್ಲೆ ಮೀರುವಂತಿರುವುದಿಲ್ಲ. ನಿವೃತ್ತಿ ಜೀವನ ವೃತ್ತಿ ಜೀವನಕ್ಕಿಂತ ಅತ್ಯಂತ ವಿಶಾಲವಾದುದು. ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು. ಸಾಲ ಮಾಡಿಕೊಂಡು ಕಷ್ಟಪಡಬೇಡಿ. ಹಣಕಾಸಿನ ಹಿಡಿತ ನಿಮ್ಮ ಕೈಯಲ್ಲಿ ರಲಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪರೆಡ್ಡಿ ಮಾತನಾಡಿ, ಸುಪ್ರೀಂ ಕೋರ್ಟ್, 1982ಡಿಸೆಂಬರ್ 17ರಂದು ನೀಡಿದ ಮಹತ್ವದ ತೀರ್ಪಿನಿಂದಾಗಿ ನಿವೃತ್ತ ನೌಕರರ ದಿನವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಚಿತ್ರದುರ್ಗದಲ್ಲಿ ಸುಸಜ್ಜಿತವಾದ ನಿವೃತ್ತ ನೌ ಕರರ ಭವನ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎ.ಎಂ.ವೀಣಾ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ, ಕಾರ್ಯಾಧ್ಯಕ್ಷ ಎಂ.ಶಿವಾನಂದಪ್ಪ, ಸಲಹಾ ಮಂಡಳಿ ಅಧ್ಯಕ್ಷ ಬಿ.ಬಡಮಲ್ಲಪ್ಪ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕೇಂದ್ರದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಬುದ್ಧ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿ ಪುರಸ್ಕೃತ ಪಿ.ನಾಗರಾಜ್, ಶ್ರೀಮತಿ ಎಚ್.ಬಿಲ್ಲಪ್ಪ ಮತ್ತಿತರರು ಇದ್ದರು.
ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಮೋಕ್ಷಾ ರುದ್ರಸ್ವಾಮಿ, ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಸ್ಥಾಪನಾ ಅಧ್ಯಕ್ಷೆ ಗಾಯತ್ರಿ ಶಿವರಾಂ ಹಾಗೂ ನಾಲ್ವರು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶೋಭಾ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಮಂಜುನಾಥ್ ನಿರೂಪಿಸಿದರು.