ಮಂಗಳೂರು: ಕರೊನಾ ಸೋಂಕು ತಗುಲಿದ್ದ ಮಗುವಿನ ಶುಶ್ರೂಷೆ ಮಾಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ನರ್ಸ್ ಸರಸ್ವತಿ ಹೋಂ ಕ್ವಾರಂಟೈನಲ್ಲಿದ್ದರು. ಅವರ ಕುಟುಂಬಕ್ಕೆ ಯಾರೂ ಬಹಿಷ್ಕಾರ ಹಾಕಿರಲಿಲ್ಲ ಎಂದು ಮನೆಯವರೇ ಸ್ಪಷ್ಟಪಡಿಸಿದ್ದಾಗಿ ಕೊಣಾಜೆ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಸವಿತಾ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಅವರ ವೇತನ ಕಡಿತಗೊಳಿಸುವುದಿಲ್ಲ ಎಂದು ಆಸ್ಪತ್ರೆಯವರೂ ಭರವಸೆ ನೀಡಿದ್ದರು. ಅವರಿಗೆ ಬೇಕಾದ ಅಂಗಡಿಯಿಂದ ಅವಶ್ಯ ಸಾಮಗ್ರಿ ತಲುಪಿಸುವ ಬಗ್ಗೆ ಪಂಚಾಯಿತಿಯಿಂದಲೂ ತಿಳಿಸಲಾಗಿತ್ತು. ಆದರೆ ಯಾರೂ ಬಹಿಷ್ಕಾರ ಹಾಕಿಲ್ಲ. ಮಾಹಿತಿ ಕೊರತೆಯಿಂದ ತಪ್ಪು ಪ್ರಚಾರವಾಗಿದೆ ಎಂದು ಶುಕ್ರವಾರ ಸ್ಪಷ್ಟಪಡಿಸಿದರು.
ದೃಶ್ಯ ಮಾಧ್ಯಮವೊಂದರಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ವಿಷಯ ತಿಳಿದು ಶಾಸಕ ಯು.ಟಿ. ಖಾದರ್ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ತಾಪಂ ಸದಸ್ಯ ನವೀನ್ ಪಾದಲ್ಪಾಡಿ, ಬಿಜೆಪಿ ಮಹಿಳಾ ಮೋರ್ಚಾದ ಪೂರ್ಣಿಮಾ ಶೆಟ್ಟಿ, ಪಂಚಾಯಿತಿ ಸದಸ್ಯ ಪ್ರಕಾಶ್ ಶೆಟ್ಟಿ, ದೀಕ್ಷಿತ್ ಮತ್ತಿತರರು ಶುಕ್ರವಾರ ಅವರ ಮನೆಗೆ ಭೇಟಿ ನೀಡಿ ಅವಶ್ಯ ಸಾಮಗ್ರಿ ವಿತರಿಸಿದ್ದಾಗಿ ತಿಳಿಸಿದರು.
14 ದಿನ ಮನೆಯಲ್ಲೇ ಇರಲು ಸೂಚನೆ: ಸಜಿಪನಡುವಿನ ಮಗುವಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಸರಸ್ವತಿ ಮಗುವನ್ನು ಹಿಡಿದಿದ್ದರು. ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟ ನಂತರ ಅವರು ಗಾಬರಿಯಾಗಿದ್ದರು. ಬಳಿಕ ಅವರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಅವರನ್ನು 14 ದಿನ ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅವರಿಗೆ ದಿನೋಪಯೋಗಿ ವಸ್ತುಗಳನ್ನು ಪಡೆಯುವುದು ಕಷ್ಟವಾಗಿತ್ತು. ಸ್ಥಳೀಯರೂ ಮನೆಗೆ ಭೇಟಿ ನೀಡಲು ಹಿಂಜರಿದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಹಿಷ್ಕರಿಸಲಾಗಿದೆ ಎಂಬು ತಪ್ಪು ಕಲ್ಪನೆ ನಿರ್ಮಾಣವಾಗಿತ್ತು ಎಂದು ಸವಿತಾ ವಿವರಿಸಿದರು.
ರಾತ್ರಿ ವಾಕಿಂಗ್ ಹೋಗುತ್ತಿದ್ದ ಅಪ್ಪನ ವಿರುದ್ಧ ಮಗನಿಂದಲೇ ಪೊಲೀಸರಿಗೆ ದೂರು!