ಬೆಂಗಳೂರು: ಸ್ಯಾಂಟ್ರೋ ರವಿ ಎಂದೇ ಹೆಸರಾಗಿದ್ದ ಆರೋಪಿ ಕೆ.ಎಸ್. ಮಂಜುನಾಥ್ ಬಂಧನದ ಬಳಿಕ ಆತ ಈಗ ಹೇಗಿದ್ದಾನೆ ಎಂಬ ಅಸಲಿ ಮುಖ ಬಹಿರಂಗಗೊಂಡಿದೆ. ಮಾತ್ರವಲ್ಲ, ರಾಜ್ಯದಿಂದ ಪರಾರಿ ಆಗಿದ್ದು ಹೇಗೆ ಎಂಬ ಅಸಲಿಯತ್ತು ಕೂಡ ಹೊರಬಿದ್ದಿದೆ.
ಸ್ಯಾಂಟ್ರೋ ರವಿ ಕರ್ನಾಟಕದಿಂದ ಪರಾರಿಯಾಗಲು ಎರಡು ಕಾರುಗಳನ್ನು ಬಳಸಿದ್ದ, ಆತನಿಗೆ ಆಪ್ತರು ಈ ಕಾರುಗಳನ್ನು ಒದಗಿಸಿದ್ದರು ಎನ್ನಲಾಗಿದೆ. ಬಂಧನದ ಭೀತಿಯಿಂದ ಎರಡು ಕಾರುಗಳನ್ನು ಬಳಸಿ ಪರಾರಿಯಾಗಿದ್ದ ಈತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದಾನೆ.
ಹ್ಯುಂಡೈ ಸ್ಯಾಂಟ್ರೋ ತನ್ನ ಹೆಸರಿನೊಂದಿಗೆ ಗುರುತಿಸಲ್ಪಡುವ ರವಿ, ಪರಾರಿಯಾಗಲಿಕ್ಕೂ ಬಳಸಿರುವ ಎರಡು ಕಾರುಗಳು ಕೂಡ ಹ್ಯುಂಡೈ ಕಂಪನಿಗೆ ಸೇರಿದವು ಎಂಬುದು ಕುತೂಹಲಕಾರಿ ಅಂಶ. ಇದು ಕಾಕತಾಳೀಯವೋ ಅಥವಾ ಇದಕ್ಕೆ ಏನಾದರೂ ಕಾರಣ ಇದೆಯೇ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಮೊದಲಿಗೆ ಹ್ಯುಂಡೈ ಐ 20 ಕಾರಿನ ಮೂಲಕ ಬೆಂಗಳೂರು ಬಿಟ್ಟಿದ್ದ ಸ್ಯಾಂಟ್ರೋ ರವಿ, ಕರ್ನಾಟಕ ದಾಟಿದ ಮೇಲೆ ಹ್ಯುಂಡೈ ಐ 20 ಬದಲಿಸಿದ್ದ. ಮಹಾರಾಷ್ಟ್ರಕ್ಕೆ ಪ್ರವೇಶಿಸಿದ್ದ ಆತ ಅಲ್ಲಿ ಹ್ಯುಂಡೈ ವೀನ್ಯೂ ಕಾರಿನ ಮೂಲಕ ಗುಜರಾತ್ ತಲುಪಿದ್ದ ಎನ್ನಲಾಗಿದೆ.
ಎರಡೂ ಕಾರುಗಳನ್ನು ಬೇರೆ ಬೇರೆ ಆಪ್ತರಿಂದ ಪಡೆದುಕೊಂಡಿದ್ದ ರವಿ, ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಎಲ್ಲಿಯೂ ಮೊಬೈಲ್ಫೋನ್ ಬಳಸಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ರವಿಯ ಬೆನ್ನತ್ತಿ ಹೊರಟ ಪೊಲೀಸರಿಗೆ ಆತ ಕಾರಿನ ಮೂಲಕ ಗುಜರಾತ್ ತಲುಪಿದ್ದ ಖಚಿತವಾಗಿದ್ದು, ಅಲ್ಲಿಯೇ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..
ಶಾಸಕರ ಕಾರಿಗೆ ವೃದ್ಧೆ ಬಲಿ!?; ಆಕೆಯ ಸಾವಿಗೆ ನನ್ನ ಕಾರಲ್ಲ, ನಾಯಿ ಕಾರಣ ಎಂದ ಎಂಎಲ್ಎ