ಬೆಂಗಳೂರು: ಈ ಚಿತ್ರದಲ್ಲಿ ರಾಜಕೀಯ ಧುರೀಣರು ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರ ಜತೆ ಪೋಸ್ ಕೊಟ್ಟು ನಿಂತುಕೊಂಡವನ ಹೆಸರು ಯುವರಾಜ್ ಅಲಿಯಾಸ್ ಸ್ವಾಮಿ. ಸರ್ಕಾರಿ ಉದ್ಯೋಗದ ಆಮಿಷ ಒಡ್ಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಗುಳುಂ ಮಾಡಿ ನಿರಾತಂಕನಾಗಿದ್ದ ಈತನೀಗ ಸಿಕ್ಕಿಬಿದ್ದಿದ್ದಾನೆ.
ಸುಮಾರು ಒಂದು ಕೋಟಿಯಷ್ಟು ಹಣದ ವಂಚನೆಯ ಆರೋಪ ಇವನ ಮೇಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಈತನ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 26 ಲಕ್ಷ ರೂಪಾಯಿಯ ನಗದು ವಶಪಡಿಸಿಕೊಳ್ಳಲಾಗಿದೆ. ಬೆಳಗ್ಗೆ ಸರ್ಚ್ ವಾರೆಂಟ್ ತೆಗೆದುಕೊಂಡು ಹೋಗಿರುವ ಪೊಲೀಸರು ದಾಳಿ ನಡೆಸಿದ್ದಾರೆ. ಅವನನ್ನು ಅರೆಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಎಲ್ಲಾ ಧುರೀಣರ ಜತೆ ಫೋಟೊ ತೆಗೆಸಿಕೊಳ್ಳುವ ಈತ ಎಲ್ಲರೂ ತನಗೆ ಪರಿಚಯವಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅಲ್ಲಿಯ ನಾಯಕರನ್ನು ಅದ್ಹೇಗೋ ಮರಳು ಮಾಡಿ ಫೋಟೋ ತೆಗೆಸಿಕೊಳ್ಳುವಲ್ಲಿ ಈತ ನಿಸ್ಸೀಮನಾಗಿದ್ದ. ಇವನ ಫೋಟೋ ನೋಡಿದ ಜನ ಸರ್ಕಾರಿ ನೌಕರಿ ಸಿಗಬಹುದು ಎಂಬ ಆಸೆಯಲ್ಲಿ ಲಕ್ಷಾಂತರ ರೂಪಾಯಿ ದುಡ್ಡು ಸುರಿಯುತ್ತಿದ್ದರು. ಉಮೇಶ್ ಎಂಬುವವರು ಈತನ ಬಳಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಉಮೇಶ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿದ್ದ ಯುವರಾಜ್ ಆತನಿಂದ ನೂರು ಚೆಕ್ ಗಳನ್ನು ಪಡೆದು ಸಹಿ ಹಾಕಿಸಿಕೊಂಡಿದ್ದ. ಇದರಿಂದ ಅನುಮಾನಗೊಂಡ ಉಮೇಶ್, ಹಾರಿಕೆ ಉತ್ತರ ಕೊಟ್ಟಿದ್ದ.
ಇದನ್ನೂ ಓದಿ: ಪಾಕ್ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…
ನಂತರ ತನಿಖೆ ನಡೆಸಿದಾಗ ಉಮೇಶ್ ಅವರ ಬ್ಯಾಂಕ್ ಖಾತೆಯಿಂದ 1.3 ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆಸಿದ್ದು ಬೆಳಕಿಗೆ ಬಂದಿದೆ. ಮೊದಲು 20 ಲಕ್ಷ, ನಂತರ 30 ಲಕ್ಷ ಹಾಗೂ ನಂತರ 80 ಲಕ್ಷದಂತೆ ಉಮೇಶ್ ಖಾತೆಗೆ ಹಣ ಜಮಾವಣೆಯಾಗಿದೆ. ನಂತರ ಖಾತೆಯಿಂದ ಹಣ ಡ್ರಾ ಮಾಡಿದ್ದಾನೆ.
ಚಾಲಕನೊಬ್ಬನ ಬ್ಯಾಂಕ್ ಖಾತೆಯಿಂದ ಇಷ್ಟೊಂದು ಹಣ ಜಮಾವಣೆಯಾಗಿದ್ದು ಹಾಗೂ ಹಣ ವಿತ್ಡ್ರಾ ಆಗಿರುವುದು ಐಟಿ ಇಲಾಖೆಯ ಸಂದೇಹಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ಕೇಳಿ ಉಮೇಶ್ಗೆ ನೋಟಿಸ್ ಕಳುಹಿಸಲಾಗಿದೆ.
ನೋಟಿಸ್ ನೋಡಿ ಕಂಗಾಲಾದ ಉಮೇಶ್, ಈ ಬಗ್ಗೆ ಯುವರಾಜ್ಗೆ ಕೇಳಿದ್ದಾನೆ. ಇಷ್ಟೆಲ್ಲಾ ಆಗುತ್ತದೆ ಎಂಬ ಅರಿವು ಇರದ ಯುವರಾಜ್, ಉಮೇಶ್ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆಧರಿಕೆ ಹಾಕಿದ್ದಾನೆ.
ಇದಕ್ಕೆ ಸೊಪ್ಪು ಹಾಕದ ಉಮೇಶ್ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ಮಾಡಲಾಗಿದ್ದು, ಮೋಸ ಬೆಳಕಿಗೆ ಬಂದಿದೆ.
ಸದ್ಯ ಈತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಸಿಸಿಬಿ ಬೆಳಗ್ಗೆ ಈತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನೂ ಎಷ್ಟು ಮಂದಿಗೆ ಈತ ಮೋಸ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸರ್ಕಾರಿ ಉದ್ಯೋಗದ ಹಿಂದೆ ಬಿದ್ದು ನೀವೂ ಈತನಿಗೇನಾದರೂ ದುಡ್ಡು ಕೊಟ್ಟಿದ್ದೀರಾ ನೋಡಿಕೊಂಡು ಬಿಡಿ.
VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ
ಮಾದರಿ ಗ್ರಾಮ ಪಂಚಾಯತಿ ಯೋಜನೆಗೆ ಬೇಕಾಗಿದ್ದಾರೆ 510 ಅರ್ಹ ಅಭ್ಯರ್ಥಿಗಳು
ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…