ತೀರ್ಥಹಳ್ಳಿ: ಮರದಿಂದ ಬಿದ್ದು ಬೆನ್ನು ಮೂಳೆ ಮುರಿದು ಕಳೆದ ಆರು ತಿಂಗಳಿಂದ ಹಾಸಿಗೆ ಹಿಡಿದಿದ್ದ ಅಗ್ರಹಾರ ಹೋಬಳಿಯ ಸಿರಿಗಾರು ಗ್ರಾಮದ ಅಶೋಕ್ ಎಂಬುವವರು ವ್ಹೀಲ್ಚೇರ್ನಲ್ಲೇ ಬಂದು ಅರಳಸುರುಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮನೆಯಲ್ಲೇ ಮತದಾನ ಮಾಡುವ ಅವಕಾಶದಿಂದ ವಂಚಿತರಾದರೂ ಅಶೋಕ್ ತಮ್ಮ ಹಕ್ಕನ್ನು ಚಲಾಯಿಸಿದರು.
ಬೆಳಗ್ಗೆ ಬಿರುಸಾಗಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿತ್ತು. ಸಿಂಧುವಾಡಿ ಮುತ್ತೂರು ಹೋಬಳಿಯ ದೇವಂಗಿಯಲ್ಲಿ ವಿವಿ ಪ್ಯಾಟ್ ಕೈಕೊಟ್ಟಿದ್ದು ಕೆಲಹೊತ್ತು ಮತದಾನ ಸ್ಥಗಿತಗೊಂಡಿತ್ತು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲಾಯಿತು.
ಶಾಸಕ ಆರಗ ಜ್ಞಾನೇಂದ್ರ ಬೆಳಗ್ಗೆ ಕುಟುಂಬ ಸದಸ್ಯರೊಂದಿಗೆ ಗುಡ್ಡೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಟ್ಟಣದ ಸೊಪ್ಪುಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲಿಗರಾಗಿ ತಮ್ಮ ಹಕ್ಕನ್ನು ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಪಟ್ಟಣದ ಬೆಟ್ಟಮಕ್ಕಿ ಸರ್ಕಾರಿ ಶಾಲೆಯಲ್ಲಿ ಮತ ಹಾಕಿದರು. ಮಳಲೀಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೊಣಬೂರು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.