ಬೆಂಗಳೂರು: 1.3 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದು ರೈಲಿನಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಬಂಧಿಸಲು ಬೆಂಗಳೂರು ಪೊಲೀಸರು ವಿಮಾನದಲ್ಲಿ ಹೋಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದೊಂದು ರೀತಿಯಲ್ಲಿ ಅಸಾಮಾನ್ಯ ಘಟನೆ ಎಂದೇ ಹೇಳಬಹುದು. ಏಕೆಂದರೆ, ಕಳ್ಳನ ಸುದ್ದಿ ತಿಳಿಯುತ್ತಿದ್ದಂತೆಯೇ ಆತ ಸುಲಭದಲ್ಲಿ ಸಿಗುವುದಿಲ್ಲ ಎಂದು ತಿಳಿದ ಪೊಲೀಸರ ಯೋಜನೆಯಿಂದಾಗಿ ಕಳ್ಳ ಅಂತೂ ಸಿಕ್ಕಿಬಿದ್ದಿದ್ದಾನೆ.
ವಿಮಾನದಲ್ಲಿ ಹಾರಿದ ಪೊಲೀಸರು ರೈಲಿಗಿಂತ ಮುಂಚಿತವಾಗಿ ಹೌರಾವನ್ನು ತಲುಪುವ ಮೂಲಕ ರೈಲನ್ನು ಕಾದು, ಕಳ್ಳನನ್ನು ಹಿಡಿದಿದ್ದಾರೆ.
ಮೂಲತಃ ಪಶ್ಚಿಮ ಬಂಗಾಳದ ಬುರ್ದ್ವಾನ್ನ ಆರೋಪಿ ಬೆಂಗಳೂರಿನ ಬಿಲ್ಡರ್ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ಕಳ್ಳನಿಗೆ ಅವರು ನೆಲಮಾಳಿಗೆಯಲ್ಲಿಯೇ ಮನೆ ಕೊಟ್ಟಿದ್ದರು. ಮನೆ ಮಾಲೀಕರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಪರೀಕ್ಷೆಗೆಂದು ಹೋಗಿದ್ದರು.
ಇದನ್ನೂ ಓದಿ: ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ
ಮಾಲೀಕರು ಇಲ್ಲದ್ದನ್ನು ಕಂಡ ಆರೋಪಿ, ಹೊಂಚು ಹಾಕಿ ಮನೆಯಲ್ಲಿದ್ದ 1.3 ಕೋಟಿ ರೂ. ಮೌಲ್ಯದ ಅಮೂಲ್ಯ ಆಭರಣಗಳನ್ನು ಹೊಂದಿರುವ ಇಲೆಕ್ಟ್ರಿಕ್ ಲಾಕರ್ ಅನ್ನೇ ಕದ್ದು ಒಯ್ದಿದ್ದಾನೆ. ಇನ್ನು ತಾನು ಜೀವನಪೂರ್ತಿ ಆರಾಮದಿಂದ ಕಳೆಯಬಹುದು. ತನ್ನನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದುಕೊಂಡ ಆರೋಪಿ ಪಶ್ಚಿಮ ಬಂಗಾಳದ ಹೌರಾಕ್ಕೆ ರೈಲು ಹತ್ತಿದ್ದಾನೆ.
ಇತ್ತ ಮನೆಗೆ ಬರುತ್ತಿದ್ದಂತೆಯೇ ಕಳ್ಳತನವಾಗಿರುವುದು ತಿಳಿದ ಮಾಲೀಕರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಆ ಕ್ಷಣದಲ್ಲಿಯೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಕಳ್ಳ ಯಶವಂತಪುರದ ರೈಲ್ವೆ ನಿಲ್ದಾಣದಿಂದ ರೈಲು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದಾಗಲೇ ರೈಲು ಹೋಗಿ ತುಂಬಾ ಹೊತ್ತು ಆಗಿದ್ದರಿಂದ ತಡ ಮಾಡದ ಪೊಲೀಸರು ಕೋಲ್ಕತಾ ವಿಮಾನ ಹತ್ತಿದರು. ರೈಲು ಇನ್ನೂ ಹೌರಾ ನಿಲ್ದಾಣ ತಲುಪಿರಲಿಲ್ಲ. ಆದ್ದರಿಂದ ಅಲ್ಲಿಯೇ ಇಳಿದ ಪೊಲೀಸರು ರೈಲು ಬರುವುದಕ್ಕಿಂತ ಮುಂಚಿತವಾಗಿ ನಿಲ್ದಾಣ ತಲುಪಿದರು.
ನಿಶ್ಚಿಂತೆಯಿಂದ ಕನಸು ಕಾಣುತ್ತಿದ್ದ ಕಳ್ಳನನ್ನು ಅಲ್ಲಿಯೇ ಬಂಧಿಸಿದ ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್ ವಿಜೇತ
ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ ಸುತ್ತ…