ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ನಡುವಿನ ಹಲವು ತಿಂಗಳ ಶೀತಲ ಸಮರದಿಂದಾಗಿ ಇಲ್ಲಿಯ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದಿತ್ತು. ರಾಜಕೀಯವು ದಿನಕ್ಕೊಂದು ಹೊಸರೂಪ ಪಡೆಯುತ್ತಿದ್ದು, ಪಕ್ಷ ಇಬ್ಭಾಗವಾಗುವತ್ತ ಸಾಗುತ್ತಿದೆ ಎನ್ನುವುದರ ನಡುವೆಯೇ ಇದೀಗ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
2021ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಕಳೆದ ಒಂದು ವಾರದಿಂದ ಭಾರಿ ಚರ್ಚೆ ಶುರುವಾಗಿತ್ತು. ಇ. ಪಳನಿಸ್ವಾಮಿ ಹಾಗೂ ಓ. ಪನ್ನೀರ್ ಸೆಲ್ವಂ ನಡುವೆ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಪೈಪೋಟಿ ನಡೆದಿತ್ತು.
ಇದುವರೆಗೆ ಏನು ನಡೆದಿದೆಯೋ ಒಳ್ಳೆಯದಕ್ಕಾಗಿಯೇ ನಡೆದಿದೆ. ಈಗ ನಡೆಯುತ್ತಿರುವುದು ಸಹ ಒಳ್ಳೆಯದಕ್ಕೆ. ಮುಂದೆ ನಡೆಯುವುದೂ ಸಹ ಒಳ್ಳೆಯದಕ್ಕೆ ಎಂದು ಪನ್ನೀರ್ ಸೆಲ್ವಂ ನಿನ್ನೆ ರಾತ್ರಿಯ ವೇಳೆ ಮಾಡಿರುವ ಟ್ವೀಟ್, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.
ಇವರ ಟ್ವೀಟ್ ಬೆನ್ನಲ್ಲೇ, ಮುಖ್ಯಮಂತ್ರಿಗಳು ಸಾಲುಸಾಲು ಸಭೆಗಳನ್ನು ನಡೆಸಿದ್ದರು. ಇಂದು ನಸುಕಿನ 3.30ರವರೆಗೂ ಮಾತುಕತೆ ನಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಸುರೇಶ್ ಅಂಗಡಿ ಸ್ಮಾರಕ ನಿರ್ಮಾಣ ಬೆಳಗಾವಿಯಲ್ಲೋ, ದೆಹಲಿಯಲ್ಲೋ?
ಕೊನೆಗೂ ಸಿಎಂ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಪಳನಿಸ್ವಾಮಿ ಅವರ ಹೆಸರು ಅಂತಿಮವಾಗಿದೆ. ಈ ಮೂಲಕ ಭಾರಿ ಕುತೂಹಲ ಕೆರಳಿಸಿದ್ದ ಸಿಎಂ ಅಭ್ಯರ್ಥಿ ಹೆಸರಿಗೆ ಕೊನೆಗೂ ತೆರೆ ಬಿದ್ದಿದೆ.
2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಪಕ್ಷದ ಅಧಿನಾಯಕಿ ಜೆ. ಜಯಲಲಿತಾ ಮೃತಪಟ್ಟಿದ್ದರು. ಅವರ ನಿಧನದ ನಂತರ ಪನ್ನೀರ್ ಸೆಲ್ವಂ ಅಧಿಕಾರ ವಹಿಸಿಕೊಂಡಿದ್ದರು. ಪನ್ನೀರ್ ಸೆಲ್ವಂ ಅವರು ಸಮೂಹ ನಾಯಕತ್ವಕ್ಕೆ 11 ಸದಸ್ಯರ ಸಮಿತಿ ಬೆಲೆ ನೀಡುವುದು ಎಂಬ ಭರವಸೆ ಹೊಂದಿದ್ದರು. ಆದರೆ, ಪಳನಿಸ್ವಾಮಿ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಪನ್ನೀರ್ ಸೆಲ್ವಂ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲು ನಿರ್ಧರಿಸಲಾಗಿದೆ.
ಈ ನಡುವೆಯೇ, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಕೆ ಶಶಿಕಲಾ ಅವರು ಇನ್ನು ಕೆಲವೇ ತಿಂಗಳುಗಳಲ್ಲಿ ಜೈಲಿನಿಂದ ಬಿಡುಗಡೆ ಹೊಂದಲಿರುವ ಸಾಧ್ಯತೆ ಇದೆ. ಅವರು ಮರಳಿದ ಬಳಿಕ ಇನ್ನೂ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿದೆ.
ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ಅಸೆಂಬ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಹಾಥರಸ್ ರೇಪ್ ಕೇಸ್ಗೆ ಭಾರಿ ಟ್ವಿಸ್ಟ್: ಆರೋಪಿಯೊಂದಿಗೆ 104 ಬಾರಿ ಫೋನ್ಕಾಲ್ ಮಾಡಿದ್ದ ಯುವತಿ!
ಸೈಬರ್ ದೌರ್ಜನ್ಯಕ್ಕೆ ಮಹಿಳೆಯರೇ ಟಾರ್ಗೆಟ್ : ಇದು ಹೇಗೆ? ಆತಂಕದ ಅಂಕಿ-ಅಂಶ ನೀಡಿದೆ ವಿಶ್ವಸಂಸ್ಥೆ
ಕಲಬುರಗಿಯಲ್ಲಿ ಗುಂಡಿನ ಸದ್ದು: ಕೊಲೆ ಮಾಡಿ ಪರಾರಿಯಾಗುತ್ತಿದ್ದನ ಗುಂಡುಹಾರಿಸಿ ಬಂಧನ