ಬೆಂಗಳೂರು: ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಕರೊನಾ ಸೋಂಕಿಗಾಗಿ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆಯೇ ಪ್ರವಾಹದಿಂದ ರಾಜ್ಯದ ಕೆಲವು ಭಾಗಗಳು ತತ್ತರಿಸಿ ಹೋಗಿದ್ದು, ಆಸ್ಪತ್ರೆಯಲ್ಲಿದ್ದುಕೊಂಡೇ ಯಡಿಯೂರಪ್ಪನವರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಸಿದ್ದರಾಮಯ್ಯನವರು, ತಾವು ಈ ಹಿಂದೆ ಪ್ರವಾಹದ ಕುರಿತು ನೀಡಿರುವ ಎಚ್ಚರಿಕೆಯನ್ನು ಕಡೆಗಣಿಸಿದಕ್ಕಾಗಿಯೇ ಇಂಥ ಪರಿಸ್ಥಿತಿ ಬಂದಿದೆ ಎಂದು ಗುಡುಗಿದ್ದಾರೆ.
ಕೋವಿಡ್- 19 ಉಪಕರಣ ಖರೀದಿಯಲ್ಲಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿ ಲೆಕ್ಕ ಕೇಳಿದ್ದ ಸಿದ್ದರಾಮಯ್ಯನವರು ಈಗ ಮತ್ತೆ ಆಸ್ಪತ್ರೆಯಲ್ಲಿದ್ದುಕೊಂಡೇ ಸರ್ಕಾರದಿಂದ ಲೆಕ್ಕಾಚಾರದ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಗೆ ಸರ್ಕಾರ ಮಾಡಿರುವ ಖರ್ಚು ವೆಚ್ಚ, ಪರಿಹಾರದ ಬಗ್ಗೆ ಇದುವರೆಗೂ ತಮಗೆ ಮಾಹಿತಿ ನೀಡಲಿಲ್ಲ. ಈ ನಡುವೆಯೇ ಮತ್ತೆ ಪ್ರವಾಹ ಬಂದಿದೆ. ನಾನು ಹೇಳಿದ್ದನ್ನು ಕೇಳದ ಕಾರಣ ಇಂಥ ಸ್ಥಿತಿ ಉಂಟಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತಾವು ಈ ಹಿಂದೆ ಕೇಳಿರುವ ಲೆಕ್ಕಾಚಾರದ ಪ್ರತಿಯನ್ನು ಲಗತ್ತಿಸಿದ್ದು, ಈಗಲಾದರೂ ಆ ಮಾಹಿತಿ ನೀಡುವಂತೆ ಪರೋಕ್ಷವಾಗಿ ಸರ್ಕಾರವನ್ನು ಚುಚ್ಚಿದ್ದಾರೆ.
The failure of State govt to provide relief to last year's flood damage has aggravated the condition of this year's flood.
I had warned the ministers a month back about the same, but as usual, there was no response.
— Siddaramaiah (@siddaramaiah) August 9, 2020
ಸಿದ್ದರಾಮಯ್ಯ ಬರೆದಿರುವ ಪತ್ರದಲ್ಲಿ ಇರುವ ಅಂಶಗಳು ಇವು:
ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿಗೆ ರಾಜ್ಯಸರ್ಕಾರ ಕೈಕಾಲು ಬಡಿಯುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ. ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷದ ಆಗಸ್ಟ್ ಅಕ್ಟೋಬರ್ವರೆಗೆ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು? ಅವುಗಳನ್ನು ಪುನರ್ನಿಮಾಣಕ್ಕೆ ಮಾಡಿದ ಹಣ ಏಷ್ಟು? ಇನ್ನು ಎಷ್ಟು ಕಾಮಗಾರಿಗಳು ಬಾಕಿ ಇವೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು? ಈಗಲಾದರೂ ವಿವರ ನೀಡಬಹುದೇ ಎಂದು ಸರ್ಕಾರಕ್ಕೆ ಕೇಳಿದ್ದಾರೆ.
ಈ ಟ್ವೀಟ್ಗೆ ಅನೇಕ ಮಂದಿ ಕಮೆಂಟ್ ಮಾಡಿ ಸಿದ್ದರಾಮಯ್ಯ ವಿರುದ್ಧವೇ ಹರಿಹಾಯ್ದಿದ್ದಾರೆ. ನೀವು ಸಿಎಂ ಇದ್ದಾಗ ಏನು ಮಾಡಿದ್ದೀರಿ ಎನ್ನುವುದು ಗೊತ್ತು. ನಿದ್ದೆ ಮಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಈಗಿನ ಸರ್ಕಾರಕ್ಕೆ ಮಾಡಬೇಕಾದ ಕೆಲಸ ಬಹಳ ಇದ್ದು, ಅದನ್ನು ಮಾಡುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ರಾಮನಿಗಾಗಿ ಹಿಂದೂ-ಮುಸ್ಲಿಮರಿಂದ ತಯಾರಾಗ್ತಿದೆ 2,100 ಕೆ.ಜಿಯ ಐತಿಹಾಸಿಕ ಗಿಫ್ಟ್