ಗ್ಯಾಂಗ್ಟಕ್: ಮೇಘಸ್ಫೋಟದಿಂದ ಸಿಕ್ಕಿಂನ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸೈನಿಕರ ಪತ್ತೆಗಾಗಿ ಬಹು ದೊಡ್ಡ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ಸೇನೆ ತಿಳಿಸಿದೆ.
ಪ್ರವಾಹದಿಂದಾಗಿ ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಆಸ್ತಿಗಳಿಗೆ ಹಾನಿಯಾಗಿದೆ ಎಂದು ಸೇನೆಯ ಪೂರ್ವ ಕಮಾಂಡ್ ಹೇಳಿಕೆ ನೀಡಿದೆ. ಚುಂಗ್ಥಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ನೀರಿನ ಮಟ್ಟವು ನದಿಯಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಯಿತು. ಇದರಿಂದ ಸಿಂಗ್ಟಮ್ ಬಳಿಯ ಬರ್ದಂಗ್ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳಿಗೆ ತೊಂದರೆಯಾಗಿದೆ. 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದು, ಕೆಲವು ವಾಹನಗಳು ಕೆಸರಿನಡಿಯಲ್ಲಿ ಮುಳುಗಿವೆ ಮತ್ತು ಶೋಧ ಕಾರ್ಯಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಸಿಕ್ಕಿಂನಲ್ಲಿ ರಾತ್ರಿಯಿಡಿ ಭಾರೀ ಮಳೆಯಾಗಿದೆ. ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಸಂಭವಿಸಿದ ಮೇಘಸ್ಫೋಟವು ತೀಸ್ತಾ ನದಿಯಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಿತು. ಇದರಿಂದ ಭಾರೀ ಪ್ರವಾಹ ಉಂಟಾಯಿತು. ಅಂದಹಾಗೆ ತೀಸ್ತಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.
ಪ್ರವಾಹ ಹಿನ್ನೆಲೆಯಲ್ಲಿ ಸಿಕ್ಕಿಂ ಸರ್ಕಾರ ಸ್ಥಳೀಯ ನಿವಾಸಿಗಳಿಗೆ ಹೈ ಅಲರ್ಟ್ ನೀಡಿದೆ. ಇದರ ನಡುವೆ ಸ್ಥಳೀಯ ನಿವಾಸಿಗಳು ರೆಕಾರ್ಡ್ ಮಾಡಿ, ಹಂಚಿಕೊಂಡಿರುವ ವಿಡಿಯೋಗಳು ಪ್ರವಾಹದ ಭೀಕರೆತೆಯನ್ನು ತೆರೆದಿಟ್ಟಿವೆ. ರಸ್ತೆಗಳು ಕೊಚ್ಚಿಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರವಾಹದಲ್ಲಿ ಯಾರೊಬ್ಬರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ. ಸಿಂಗ್ಟಮ್ನಲ್ಲಿ ಕೆಲವು ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಿಕ್ಕಿಂನ ಚುಂಗ್ಥಾಂಗ್ನಲ್ಲಿರುವ ಸರೋವರವು ಉಕ್ಕಿ ಹರಿದ ನಂತರ ತೀಸ್ತಾ ನದಿ ತುಂಬಿ ಹರಿಯುತ್ತಿದ್ದು, ಗಜೋಲ್ಡೋಬಾ, ಡೊಮೊಹಾನಿ, ಮೆಖಲಿಗಂಜ್ ಮತ್ತು ಘಿಶ್ನಂತಹ ತಗ್ಗು ಪ್ರದೇಶಗಳ ಮೇಲೆ ತುಂಬಾ ಪರಿಣಾಮ ಬೀರಬಹುದು. ಹೀಗಾಗಿ ಜಾಗರೂಕರಾಗಿರಿ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. (ಏಜೆನ್ಸೀಸ್)
ಏಷ್ಯಾಡ್ನಲ್ಲಿ ಇಂದು ಚಿನ್ನ ಗೆಲ್ಲುವ ಫೇವರಿಟ್ ನೀರಜ್ ಚೋಪ್ರಾ ಕಣಕ್ಕೆ; ಜಾವೆಲಿನ್ ಸ್ಪರ್ಧೆಯ ಸಮಯ ಹೀಗಿದೆ…
ಕಿಸ್ ಮಾಡುವುದರಿಂದ ಮೊಡವೆಗಳು ಬರುತ್ತಾ? ತಜ್ಞರು ಹೇಳುವುದೇನು? ಇಲ್ಲಿದೆ ಉಪಯುಕ್ತ ಮಾಹಿತಿ…