ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ 26/11ರ ಮುಂಬೈ ಬ್ಲಾಸ್ಟ್ ಪ್ರಕರಣಕ್ಕೆ ನಿನ್ನೆಯಷ್ಟೇ 12 ವರ್ಷವಾಗಿದೆ. ಹಲವಾರು ಯೋಧರನ್ನು ಬಲಿ ಪಡೆದ ಈ ಬ್ಲಾಸ್ಟ್ ಪ್ರಕರಣದ ಸಂಚುಕೋರ, ಎಲ್ಇಟಿ ಉಗ್ರ ಸಂಘಟನೆಯ ಸ್ಥಾಪಕ ಹಫೀಜ್ ಸೈಯೀದ್ ಹಫೀಜ್ನನ್ನು ಪಾಕಿಸ್ತಾನವು ಜೈಲಿನಲ್ಲಿ ಇರಿಸಿದೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಆತಂಕಕಾರಿ ವಿಷಯವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದ್ದು, ಆತ ಜೈಲಿನಲ್ಲಿಯೇ ಇಲ್ಲ ಎಂದು ಹೇಳಿದೆ!
2019ರ ಜುಲೈಯಲ್ಲಿ ಹಫೀಜ್ ಬಂಧನಕ್ಕೆ ಒಳಗಾಗಿದ್ದ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನಿಗೆ 10 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಅದೇ ವರ್ಷವೇ ಲಾಹೀರ್ ಕೋರ್ಟ್ ಆದೇಶಿತ್ತು. ಸಾಲದು ಎಂಬುದಕ್ಕೆ ಕಳೆದ ವಾರ ಮತ್ತೆರಡು ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ಜೈಲು ಶಿಕ್ಷೆಯನ್ನು ಕೋರ್ಟ್ ಘೋಷಿಸಿದೆ. ಆದರೆ ಹಫೀಜ್ ಮಾತ್ರ ಜೈಲಿನಲ್ಲಿ ಇಲ್ಲದೇ ಲಾಹೋರ್ನಲ್ಲಿರುವ ತಮ್ಮ ಮನೆಯಲ್ಲಿ ವಿಲಾಸಿ ಜೀವನ ನಡೆಸುತ್ತಿರುವುದು ಗುಪ್ತಚರ ಮಾಹಿತಿಯಿಂದ ಬಹಿರಂಗವಾಗಿದೆ.
ಆತ ತನ್ನ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದು, ಮನೆಯಿಂದಲೇ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕುತ್ತಿದ್ದು, ಅಲ್ಲಿಂದಲೇ ಉಗ್ರ ಸಂಘಟನೆಯನ್ನು ಹ್ಯಾಂಡಲ್ ಮಾಡುತ್ತಿರುವ ವಿಷಯ ಗುಪ್ತಚರ ಇಲಾಖೆಗೆ ತಿಳಿದುಬಂದಿದೆ.
ಇದನ್ನೂ ಓದಿ: ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು…
ಭದ್ರತಾ ಮಂಡಳಿಯ ನಿರ್ಬಂಧಕ್ಕೆ ಒಳಗಾಗಿರುವ ಉಗ್ರನನ್ನು ಜೈಲಿನಲ್ಲಿ ಇರಿಸದೆ ಪಾಕಿಸ್ತಾನ ಆತನ ಐಷಾರಾಮಿ ಜೀವನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಭಾರತ ಮಾತ್ರವಲ್ಲದೇ ಇಡೀ ಜಗತ್ತಿನ ಕಣ್ಣಿಗೆ ಮಂಕುಬೂದಿ ಎರಚುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇಷ್ಟಕ್ಕೆ ಮುಗಿದಿಲ್ಲ ಪಾಕ್ನ ಕುತಂತ್ರ. ಹಫೀಜ್ಗೆ ಮನೆಯಲ್ಲಿಯೇ ಭದ್ರತೆಯನ್ನೂ ನೀಡಲಾಗಿದೆ. ವಿಧ್ವಂಸಕ ಕೃತ್ಯಕ್ಕೆ ರೂಪುರೇಷೆ ಮಾಡಲು ಆತನಿಗೆ ಭೇಟಿಯಾಗಲು ಉಗ್ರರೂ ಸೇರಿದಂತೆ ಇತರರಿಗೆ ಅವಕಾಶ ಕಲ್ಪಿಸಲಾಗಿದೆ.
ಲಷ್ಕರ್ನ ಜೆಹಾದ್ ಘಟಕದ ಮುಖ್ಯಸ್ಥ ಝಕೀವುರ್ ರೆಹಮಾನ್ ಲಖ್ರಿ ಕೂಡ ಉಗ್ರ ಸಯೀದ್ನ ಮನೆಗೆ ಬಂದು ಹಲವು ತಾಸುಗಳ ಕಾಲ ಮಾತುಕತೆ ನಡೆಸಿ ವಾಪಸಾಗಿದ್ದು, ಜಿಹಾದ್ಗೆ ದೇಣಿಗೆ ಸಂಗ್ರಹ ಸಹಿತ ವಿವಿಧ ವಿಚಾರಗಳ ಕುರಿತು ಈ ವೇಳೆ ಚರ್ಚಿಸಲಾಗಿತ್ತು ಎಂದೂ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದೆ.
ಅರ್ನಬ್ ಗೋಸ್ವಾಮಿ ಬಂಧನ: ಸರ್ಕಾರಕ್ಕೆ ಸುಪ್ರೀಂ ತರಾಟೆ- ಹೈಕೋರ್ಟ್ಗೂ ‘ಬುದ್ಧಿಮಾತು’
ಹೊಟ್ಟೆನೋವಿನಿಂದ ಕುಸಿದೆ, ಮಗು ಕಳೆದುಕೊಳ್ಳುತ್ತಿರುವ ಅರಿವಾಯ್ತು- ರಾಜಕುಮಾರಿ ಬಿಚ್ಚಿಟ್ಟ ನೋವಿನ ಘಟನೆ