ನವದೆಹಲಿ: ರಿಪಬ್ಲಿಕ್ ಟಿ.ವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿರುವುದರ ಕುರಿತಂತೆ ಮುಂಬೈ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಜಾಮೀನು ನೀಡದ ಮುಂಬೈ ಹೈಕೋರ್ಟ್ನ ಕ್ರಮಕ್ಕೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಗಳು ಕೆಲವೊಂದು ಉದ್ದೇಶಕ್ಕೆ ಯಾವುದೋ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತದೆ. ಅಂಥ ಸಂದರ್ಭದಲ್ಲಿ ನ್ಯಾಯಾಲಯಗಳು ಜನರಿಗೆ ಕಿರುಕುಳ ಆಗದಂತೆ ಎಚ್ಚರ ವಹಿಸಬೇಕು. ಕ್ರಿಮಿನಲ್ ಕಾನೂನು ಜನರ ಕಿರುಕುಳಕ್ಕೆ ಅಸ್ತ್ರವಾಗಬಾರದು ಎಂಬುದನ್ನು ನ್ಯಾಯಾಂಗ ಖಚಿತ ಪಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರ್ಕಾರ ಬಂಧಿಸಿದೆ ಎಂದ ಮಾತ್ರಕ್ಕೆ ಕೋರ್ಟ್ಗಳು ಹಿಂದೆ ಮುಂದೆ ವಿಚಾರಿಸದೇ ಸರ್ಕಾರದಂತೆ ವರ್ತಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಸೂಚ್ಯವಾಗಿ ಹೇಳಿದೆ.
ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ, ಈ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿರುವ ಪ್ರಕರಣ ಇದಾಗಿದೆ. ಮಹಾರಾಷ್ಟ್ರ ಸರ್ಕಾರದ ಕೆಲವೊಂದು ಲೋಪಗಳ ಬಗ್ಗೆ ಟಿ.ವಿಯಲ್ಲಿ ಪ್ರಸಾರ ಮಾಡುತ್ತಿದ್ದುದರಿಂದ ಇಂಥದ್ದೊಂದು ಕೇಸಿನಲ್ಲಿ ಅನ್ಯಾಯವಾಗಿ ತಮ್ಮನ್ನು ಸಿಲುಕಿಸಲಾಗಿದೆ ಎಂದು ಗೋಸ್ವಾಮಿ ವಾದಿಸಿದ್ದರು.
ಇದನ್ನೂ ಓದಿ: ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು…
ಆದರೆ ಮುಂಬೈ ಹೈಕೋರ್ಟ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಅರ್ನಬ್ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆ ಜಾಮೀನಿನ ಅವಧಿಯನ್ನು ಇನ್ನೂ ನಾಲ್ಕು ವಾರಗಳವರೆಗೆ ಕೋರ್ಟ್ ವಿಸ್ತರಣೆ ಮಾಡಿದೆ.
ಈ ಪ್ರಕರಣದಲ್ಲಿ ರಿಪಬ್ಲಿಕ್ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
‘ಆಡಳಿತ ನಡೆಸುವವರಿಂದ ಕ್ರಿಮಿನಲ್ ಕಾನೂನುಗಳು ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ನ್ಯಾಯಾಂಗದ ಕರ್ತವ್ಯ. ಜತೆಗೆ ಕ್ರಿಮಿನಲ್ ಕಾನೂನುಗಳು ನಾಗರಿಕರಿಗೆ ಕಿರುಕುಳ ನೀಡುವ ಅಸ್ತ್ರವಾಗಿ ಬಳಕೆಯಾಗಿಲ್ಲ ಎಂಬುದನ್ನು ನ್ಯಾಯಾಂಗ ಖಚಿತಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತೋರಿಸಿದ ಪ್ರಜೆಗೆ ಈ ನ್ಯಾಯಾಲಯದ ಬಾಗಿಲುಗಳನ್ನು ಮುಚ್ಚಲಾಗುವುದಿಲ್ಲ ಎಂದು ಪೀಠ ಹೇಳಿದೆ.
ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದೆ.
ಅನಾಥ ಮನೆ, ಘೋರ ನಿಃಶ್ಶಬ್ದ… ಪತ್ನಿ-ಮಕ್ಕಳ ನೆನೆದು ಕಣ್ಣೀರಾದ ಜೋ ಬೈಡೆನ್