ಸೊರಬ: ಪರಿಸರವು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಪರಿಸರ ಸಂರಕ್ಷಣೆಯಿಂದ ಮನುಕುಲಕ್ಕೆ ನೆಮ್ಮದಿ ಎಂದು ಶಿರಳಗಿ ಚೈತನ್ಯ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಕೊಪ್ಪಲು(ಕೆರೆಕೊಪ್ಪ) ಗ್ರಾಮದಲ್ಲಿ ಭಾರತಿ ಸಂಪದ ವಡ್ಡಿನಗದ್ದೆ, ಪರಿಸರ ಜಾಗೃತಿ ಟ್ರಸ್ಟ್, ದೊಡ್ಡಮನೆ ರಾಮಪ್ಪ ಸೇವಾ ಟ್ರಸ್ಟ್, ವಿನಾಯಕ ಮೋಟಾರ್ಸ್ ಕೋಟೇಶ್ವರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಔಷಧೀಯ ಗಿಡಮರ, ಕಾಡುಜಾತಿ ಗಿಡಮರಗಳಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮತ್ತು ರಕ್ತಚಂದನ ವನ ನಿರ್ಮಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಪ್ರಸ್ತುತ ದಿನಗಳಲ್ಲಿ ಯುವಜನತೆ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ರೂಪಿಸಬೇಕು. ಸಾಲುಮರದ ತಿಮ್ಮಕ್ಕನಂತಹವರ ಆದರ್ಶ ಪಾಲಿಸದ ಯುವಜನತೆ ಸಿನಿಮಾ ನಟರನ್ನು ಅನುಸರಿಸುತ್ತಾರೆ. ಬದುಕಿನ ಆದರ್ಶ ಯಾರಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಗಿಡ ಮರಗಳನ್ನು ರಕ್ಷಿಸುವ ಜತೆ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವ ಹೊಣೆಗಾರಿಕೆ ಮಾನವನ ಮೇಲಿದೆ. ಪ್ರಕೃತಿಯಲ್ಲಿ ದೈವ ಕಾಣುತ್ತಾ ಅರಣ್ಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಮುಂದಾಗಿರುವ ಶ್ರೀಧರ ಸೀತಾರಾಮ ಹೆಗಡೆ ಕೊಳಗಿ ಮತ್ತು ಕುಟುಂಬದವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಅರಣ್ಯ ವೀಕ್ಷಕ ಸುರೇಶ ಲಕ್ಷ್ಮಣ ನಾಯ್ಕ, ಜೇನು ಕೃಷಿ ತಜ್ಞ ವಿಘ್ನೇಶ ತಲಕಾಲಕೊಪ್ಪ, ನಾಟಿ ವೈದ್ಯ ಕೆ.ಟಿ.ಗೌಡರ್, ಕೃಷ್ಣಪ್ಪ ಬೇಳೂರು, ಪತ್ರಕರ್ತರಾದ ಯು.ಎಲ್.ಸಂದೀಪ, ಟಿ.ರಾಘವೇಂದ್ರ ಹಾಗೂ ಪರಿಸರ ದಿನಾಚರಣೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.
ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಕಾಂತಾರ ಯಜ್ಞ ಮುಖ್ಯಸ್ಥ ಮಂಜುನಾಥ್ ಹೆಗಡೆ, ಉಪ ವಲಯ ಅರಣ್ಯಾಧಿಕಾರಿ ಮೋಹನ್, ಪಿಡಿಒ ಸೀಮಾ, ಶ್ರೀಧರ ಸೀತಾರಾಮ ಹೆಗಡೆ, ವಿಜಯಲಕ್ಷ್ಮೀ, ವಿನಾಯಕರಾವ್ ಬೇಳೂರು, ಪ್ರಶಾಂತ್ ದೊಡ್ಡಮನೆ, ಶ್ರೀಪಾದ ಬಿಚ್ಚುಗತ್ತಿ, ಮಂಜುನಾಥ್ ಹೆಗಡೆ, ಅಶೋಕ್, ಶ್ರೀಧರ್ ಭಟ್ ಕೊಳಗಿ, ಗಜಾನನ ರೇವಣಕಟ್ಟಾ ಇದ್ದರು.
ಪಶ್ಚಿಮ ಘಟ್ಟಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕು. ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ. ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು. ಅರಣ್ಯ ಸಂಪತ್ತು ಉಳಿಸಲು ಮುಂದಾಗಬೇಕು.
ಅನಂತ ಹೆಗಡೆ ಆಶೀಸರ,
ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ