More

    ಕಲಾವಿದನ ಕಲ್ಪನೆಯಲ್ಲಿ ಸ್ವರ್ಗದಲ್ಲಿ ಅಪ್ಪಾಜಿ-ಅಪ್ಪು: ಹೃದಯಸ್ಪರ್ಶಿ ಫೋಟೋ ನೋಡಿ ಭಾವುಕರಾದ ನೆಟ್ಟಿಗರು

    ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ, ಕನ್ನಡ ನಾಡಿನ ಕಣ್ಮಣಿಗಳು ಎಂದೇ ಬಿಂಬಿತರಾದವರು ಡಾ.ರಾಜ್‌ಕುಮಾರ್‌ ಹಾಗೂ ಅವರ ಪುತ್ರ ಪುನೀತ್‌ ರಾಜ್‌ಕುಮಾರ್‌. ಈಗ ಇಬ್ಬರೂ ಇನ್ನಿಲ್ಲ. ಆದರೆ ಅವರ ನೆನಪು ಮಾತ್ರ ಅವರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಹಚ್ಚಹಸಿರಾಗಿಯೇ ಇರುತ್ತದೆ.

    ಕಳೆದ ವಾರ ಪುನೀತ್‌ ಅವರನ್ನು ಕಳೆದುಕೊಂಡ ಮೇಲೆ ಅವರಿಗೆ ಅವರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇದೀಗ ಚಿತ್ರಕಲಾವಿದನೊಬ್ಬ ರಚಿಸಿರುವ ಚಿತ್ರ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವರ್ಗದಲ್ಲಿರುವ ಅಪ್ಪ-ಮಗನ ಸುಂದರ ಹೃದಯಸ್ಪರ್ಶಿ ಪೇಂಟಿಂಗ್‌ ಇದಾಗಿದೆ.

    ಬಿಳಿ ಮೋಡಗಳ ನಡುವೆ ಡಾ.ರಾಜ್‌ಕುಮಾರ್‌ ಅವರ ಕಣ್ಣನ್ನು ಹಿಂದಿನಿಂದ ಮುಚ್ಚಿರುವ ಪುನೀತ್‌, ನಾನು ಯಾರು ಹೇಳು ಎಂದು ಕೇಳುತ್ತಿದ್ದರೆ ಅವರ ಸುತ್ತಲೂ ಪಾರಿವಾಳಗಳು ಸ್ವಚ್ಛಂದವಾಗಿ ಹಾರಾಡುತ್ತಿರುವ ಚಿತ್ರ ಇದಾಗಿದೆ.
    ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‍ರಾಜ್‍ಕುಮಾರ್ ಅವರು ಸ್ವರ್ಗದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಭಾಸವಾಗುತ್ತಿರುವ ಸುಂದರ ಚಿತ್ರ ಇದಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಫೋಸ್ಟರ್ ಡಿಸೈನರ್ ಆಗಿರುವ ಕರಣ್ ಆಚಾರ್ಯ ಅವರು ತಮ್ಮ ಕಲ್ಪನಾ ಲಹರಿಯಲ್ಲಿ ಇಂಥದ್ದೊಂದು ಸುಂದರ ಚಿತ್ರ ತಯಾರಿಸಿದ್ದಾರೆ.

    Image

    ಸ್ವರ್ಗದಲ್ಲಿರುವ ಡಾ.ರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್‍ರನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಬಯಸಿರುವ ಕಾರಣ, ಪುನೀತ್‌ ಅವರ ‘ಕಾಣದಂತೆ ಮಾಯ’ವಾಗಿರುವ ಕಲ್ಪನೆ ಇದಾಗಿದೆ. ಪುನೀತ್ ಸ್ವರ್ಗದಲ್ಲಿ ಅಪ್ಪಾಜಿಯವರ ಕಣ್ಣನ್ನು ಹಿಂದಿನಿಂದ ಮುಚ್ಚುವ ಮೂಲಕ ನಾನು ಯಾರು ಹೇಳಿ ಎಂದು ಪ್ರೀತಿಯಿಂದ ಕೇಳುವಂತಿರುವ ಫೋಸ್ಟರ್ ಎಂದಿದ್ದಾರೆ.

    ಡಾ.ರಾಜ್‌ಕುಮಾರ್‌ ಅವರಿಗೆ ಅತ್ಯಂತ ಪ್ರೀತಿಯ ಚಿತ್ರಗಳಲ್ಲಿ ಒಂದಾದದ್ದು ಕಸ್ತೂರಿ ನಿವಾಸ. ಅವರ ಜತೆ ಇದ್ದ ಪಾರಿವಾಳ ಕೂಡ ಅವರಿಗೆ ತುಂಬಾ ಇಷ್ಟವಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಡಾ.ರಾಜ್ ಕುಮಾರ್‌ ಅವರ ಪುತ್ಥಳಿಯ ಹೆಗಲ ಮೇಲೆ ಪಾರಿವಾಳವು ಹಾರಿ ಬಂದು ಕೂರುವ ದೃಶ್ಯ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಅದರಂತೆ ಪುನೀತ್‌ ಅವರ ‘ರಾಜಕುಮಾರ’ ಚಿತ್ರದಲ್ಲಿಯೂ ಇದೇ ರೀತಿ ಪಾರಿವಾಳಕ್ಕೆ ಮಹತ್ವ ಇದೆ.

    ಇವುಗಳನ್ನು ಬಳಸಿಕೊಂಡು ಇದೇ ಕಾನ್ಸೆಪ್ಟ್‌ ಬಳಸಿಕೊಂಡು ಚಿತ್ರ ರಚಿಸಲಾಗಿದೆ. ಇದು ಸಕತ್‌ ವೈರಲ್‌ ಆಗಿದ್ದು, ಸಾವಿರಾರು ಅಭಿಮಾನಿಗಳು ಶೇರ್‌ ಮಾಡಿಕೊಂಡಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts