ನವದೆಹಲಿ: ಪಂಚಾಯಿತಿ ಚುನಾವಣೆ ಮತಎಣಿಕೆಯನ್ನು ಮುಂದೂಡಿದರೆ, ಆಕಾಶವೇನೂ ಕಳಚಿ ಬೀಳುವುದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶದ ರಾಜ್ಯ ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಟೀಕಿಸಿದೆ.
ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆಯ ಮತಎಣಿಕೆಗೂ ಮುನ್ನ ಸುಪ್ರೀಂಕೋರ್ಟ್ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತು. ಪ್ರಸ್ತುತ ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಮತಎಣಿಕೆಯನ್ನು ಮುಂದೂಡಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಇಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತಎಣಿಕೆಯನ್ನು ಮುಂದೂಡಬಹುದೇ? ಈ ಸಂದರ್ಭದಲ್ಲಿ ಎಲ್ಲೆಡೆ ಬಿಕ್ಕಟ್ಟು ಸೃಷ್ಟಿಯಾಗಿದೆ. ನೀವು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದೀರಾ? ಪರಿಶೀಲನೆ ಲಭ್ಯವಿದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮೊದಲು ಮತಎಣಿಕೆ ಸ್ಪಷ್ಟನೆ ನೀಡಿ. ಎಣಿಕೆಯನ್ನು 2 ರಿಂದ 3 ವಾರಗಳ ಕಾಲ ಮುಂದೂಡಿ. ಮತಎಣಿಕೆ ಮಾಡದಿದ್ದರೆ, ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿತು.
“ಪರಿಸ್ಥಿತಿಯ ಹೊರತಾಗಿಯೂ ನಾವು ಎಣಿಕೆಯೊಂದಿಗೆ ಮುಂದುವರಿಯುತ್ತೇವೆ ಎಂಬ ನಿಮ್ಮ ಸಮರ್ಥನೆ ಎಲ್ಲಿದೆ” ಎಂದು ನ್ಯಾಯಾಲಯ ಶನಿವಾರ ಕೇಳಿದೆ. ಇನ್ನು ಶನಿವಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, 3,500 ಸಾವುಗಳು ಸಂಭವಿಸಿವೆ.
ಇಷ್ಟೇ ಅಲ್ಲದೆ, ಮತ್ತಷ್ಟು ಪ್ರಶ್ನೆಗಳನ್ನು ಕೇಳಿರುವ ಸುಪ್ರೀಂಕೋರ್ಟ್ 2 ಲಕ್ಷಕ್ಕೂ ಅಧಿಕ ಸ್ಥಾನಗಳನ್ನು ಎಣಿಸಬೇಕಾದರೆ, ಕೇವಲ 800 ಕೇಂದ್ರಗಳಲ್ಲಿ ನೀವು ಪ್ರತಿ ಕೇಂದ್ರಕ್ಕೆ ಸುಮಾರು 800 ಸ್ಥಾನಗಳನ್ನು ಎಣಿಕೆ ಮಾಡುವಿರಿ. ಆದರೆ, ಪ್ರತಿ ಸ್ಥಾನಕ್ಕೆ ಹಲವಾರು ಅಭ್ಯರ್ಥಿಗಳು ಇರುತ್ತಾರೆ. ಎಣಿಕೆಯ ಕೇಂದ್ರಕ್ಕೆ 75 ಜನರ ಮಿತಿಯನ್ನು ನೀವು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ? ಎಂದು ಕೇಳಿದೆ.
ಇದಕ್ಕೆ ಉತ್ತರ ನೀಡಿರುವ ಅಡಿಷನಲ್ ಸಾಲಿಸಿಟರ್ ಜನರಲ್ ಭಟಿ ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆಯ ಮತಎಣಿಕೆಯು ಭಾನುವಾರಕ್ಕೆ ನಿಗದಿಯಾಗಿದೆ. ಅಂದು ವೀಕೆಂಡ್ ಕರ್ಫ್ಯೂ ಇರುವುದರಿಂದ ಸುಲಭವಾಗಿ ಜನಸಮೂಹವನ್ನು ನಿಯಂತ್ರಿಸಬಹುದು ಎಂದಿದ್ದಾರೆ. ಅಲ್ಲದೆ, ಇದು ಬ್ಯಾಲಟ್ ಪೇಪರ್ ಆಗಿರುವುದರಿಂದ ಪೂರ್ಣಗೊಳಿಸಲು 2 ರಿಂದ 3 ದಿನಗಳು ಹಿಡಿಯುತ್ತದೆ. ನಾವು ಎಲ್ಲವನ್ನು ಅಫಿಡೆವಿಟ್ನಲ್ಲಿ ಸೋಮವಾರ ಸಲ್ಲಿಸುತ್ತೇವೆಂದು ಭಟಿ ಸ್ಪಷ್ಟನೆ ನೀಡಿದರು.
ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, ನಾಳೆ ಎಣಿಕೆ ಪ್ರಾರಂಭವಾಗಿದರೆ, ಅಫಿಡವಿಟ್ಗಾಗಿ ಸಮಯ ತೆಗೆದುಕೊಳ್ಳುವುದರ ಅರ್ಥವೇನು? ಕರ್ಫ್ಯೂ ಭಾನುವಾರ ಮಾತ್ರ. ಕರ್ಫ್ಯೂ ಇಲ್ಲದಿದ್ದಾಗ ಸೋಮವಾರ ಮತ್ತು ಮಂಗಳವಾರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಲಿದ್ದೀರಿ? ಎಂದು ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿರುವ ಭಟಿ ಅವರು ಮಂಗಳವಾರ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮುಂದುವರಿಯಲಿದೆ ಮತ್ತು ಹೆಚ್ಚಿನ ಅಧಿಕಾರಿಗಳು ಕಾವಲಿನಲ್ಲಿರುತ್ತಾರೆಂದು ಹೇಳಿದ್ದಾರೆ. (ಏಜೆನ್ಸೀಸ್)
ಲಸಿಕೆಗೆ ಹೆಚ್ಚು ಹಣ ಕೇಳುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ
ಅಂತಾರಾಷ್ಟ್ರೀಯ ಬಾಡಿಬಿಲ್ಡರ್, ಮಿಸ್ಟರ್ ಇಂಡಿಯಾ ಜಗದೀಶ್ ಲಾಡ್ ಕರೊನಾಗೆ ಬಲಿ