ಬೆಂಗಳೂರು: ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರು ಬಹಳ ದಿನಗಳ ನಂತರ ವಾಪಸ್ಸಾಗಿದ್ದಾರೆ. ಲಾಕ್ಡೌನ್ಗೂ ಮುನ್ನ, ಅವರು ‘ಪಂಪ’ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಆ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಹೆಸರು ಕೇಳಿದರೆ, ಇದ್ಯಾವ ತರಹದ ಚಿತ್ರ ಎಂಬ ಪ್ರಶ್ನೆ ಬರಬಹುದು. ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ, ಆದಿ ಕವಿ ಪಂಪನ ಮತ್ತೊಂದು ಅವತಾರದಂಥಾ ಪಂಚಳ್ಳಿ ಪರಶಿವಮೂರ್ತಿ ಎಂಬ ಕನ್ನಡ ಮೇಷ್ಟ್ರು ಸುತ್ತ ಈ ಚಿತ್ರ ಸುತ್ತುತ್ತದಂತೆ. ಶತೃಗಳೇ ಇಲ್ಲದಂತೆ ಬದುಕುತ್ತಿದ್ದ ಪಂಪ ಅವರ ಮೇಲೆ ಅದೊಂದು ದಿನ ಅನಾಮಿಕನೊಬ್ಬನಿಂದ ಕೊಲೆಯತ್ನವಾಗುತ್ತದೆ. ಇಷ್ಟಕ್ಕೂ ಪಂಪನನ್ನು ಕೊಲೆ ಮಾಡುವುದಕ್ಕೆ ಪ್ರಯತ್ನ ಮಾಡಿದ್ದು ಯಾರು? ಇಂಥದ್ದೊಂದು ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಚಿತ್ರ ನೋಡಬೇಕು.
ಇದನ್ನೂ ಓದಿ: ಸುಶಾಂತ್ ಸಿಂಗ್ ಕೇಸ್ನಲ್ಲೊಂದು ಬಿಗ್ ಟ್ವಿಸ್ಟ್; ಜೂ.13ರಂದು ನಡೆದ ಅಚ್ಚರಿಯ ಘಟನೆ ಇದು
ಸಾಮಾನ್ಯವಾಗಿ ಲವ್, ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾಗಿರುವ ಎಸ್. ಮಹೇಂದರ್ ಅವರು ಈ ಬಾರಿ ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ ಎನ್ನುವುದು ವಿಶೇಷ. ಈ ಕುರಿತು ಮಾತನಾಡಿರುವ ಅವರು, ‘ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದೇನೆ. ಆದರೆ, ಕನ್ನಡ ಮತ್ತು ಕನ್ನಡಿಗನ ಕುರಿತಾದ ಪಂಪ ಸಿನಿಮಾ ನನ್ನ ಪಾಲಿಗೆ ದೊರೆತಿದ್ದೇ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಅದ್ಭುತವಾದ ಕತೆ ಮತ್ತು ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿ ಅಡಕವಾಗಿದೆ. ಪಂಪನನ್ನು ನಿರ್ದೇಶಿಸಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆʼಎನ್ನುತ್ತಾರೆ ಅವರು.
ಮಹೇಂದರ್ ಅವರ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ‘ನಾದಬ್ರಹ್ಮ’ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಟೋಟಲ್ ಕನ್ನಡದ ವಿ. ಲಕ್ಷ್ಮೀಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ರಮೇಶ್ ಬಾಬು ಅವರ ಛಾಯಾಗ್ರಹಣ ಮತ್ತು ಮೋಹನ್ ಕಾಮಾಕ್ಷಿ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಪಾವನಾ ಮತ್ತೆ ರೌದ್ರಾವತಾರ
ಪ್ರೊಫೆಸರ್ ಪಂಪನ ಪಾತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೀರ್ತಿ ಭಾನು ನಟಿಸಿದ್ದಾರೆ. ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕಣ್ಣೀರಿಟ್ಟ ಅನುಶ್ರೀಗೆ ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ’ ಎಂದ ಮತ್ತೊಬ್ಬ ನಟಿ