ಮುಂಬೈ: 2013ರಲ್ಲಿ ಮುಂಬೈನ ಸೆಂಟ್ರಲ್ ಮುಂಬೈನ ಶಕ್ತಿಮಿಲ್ಸ್ ಆವರಣದಲ್ಲಿ 22 ವರ್ಷದ ಫೋಟೋ ಜರ್ನಲಿಸ್ಟ್ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸ್ಥೆ ವಹಿಸಿಕೊಟ್ಟಿದ್ದ ಅಸೈನ್ ಮೆಂಟ್ ನಿರ್ವಹಣೆಗಾಗಿ ತನ್ನ ಸಹೋದ್ಯೋಗಿ ಜತೆ ಶಕ್ತಿಮಿಲ್ಸ್ ಬಳಿ ತೆರಳಿದ್ದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಈ ಕೇಸ್ಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನಾಲ್ವರಿಗೂ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ನಾಲ್ವರು ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಅವರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಹೈಕೋರ್ಟ್ ಇಳಿಸಿದೆ. ವಿಜಯ್ ಜಾಧವ್, ಮೊಹಮ್ಮದ್ ಕ್ವಾಸಿಂ ಬೆಂಗಾಲಿ ಶೇಖ್ ಮತ್ತು ಮೊಹಮ್ಮದ್ ಅನ್ಸಾರಿ ಸದ್ಯ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
ಜೀವಾವಧಿ ಏಕೆ?
ಇಂಥ ಹೀನ ಕಾರ್ಯಕ್ಕೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿರುವ ಬಗ್ಗೆಯೂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅದೇನೆಂದರೆ, ‘ ಈ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದರಿಂದ ತಮ್ಮ ಕೃತ್ಯದ ಪಾಪಪ್ರಜ್ಞೆ ಕಾಡುವುದಿಲ್ಲ. ಒಂದೇ ಸಲ ಸಾಯುತ್ತಾರೆ. ಹೀಗಾಗಿ ತಮ್ಮ ತಪ್ಪಿನ ಅರಿವಾಗಲು ಅವರು ಸಾಯುವವರೆಗೆ ಜೈಲು ಶಿಕ್ಷೆಗೆ ಅರ್ಹವಾಗಿದ್ದಾರೆ. ಇದರಿಂದ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವಂತಾಗುತ್ತದೆ ಎಂದಿದೆ.
ಅಪರಾಧಿಗಳಿಗೆ ಪೆರೋಲ್ ಅಥವಾ ಫರ್ಲೋಗೆ ಅರ್ಹತೆ ಇರುವುದಿಲ್ಲ. ಆದ್ದರಿಂದ ಜೈಲಿನಲ್ಲಿಯೇ ಸಾಯುವವರೆಗೂ ಇರಬೇಕು. ಹೊರಗಡೆ ಹೋಗಲು ಇವರಿಗೆ ಅವಕಾಶ ಇರುವುದಿಲ್ಲ. ಸಾಯುವವರೆಗೂ ಜೈಲಿನಲ್ಲಿಯೇ ತಮ್ಮ ಕೃತ್ಯಕ್ಕೆ ಪ್ರಾಯಶ್ಚಿತ ಪಡುತ್ತಲೇ ಇರಬೇಕು. ಅವರು ಮಾಡಿದ ಅಪರಾಧಕ್ಕಾಗಿ ಪಶ್ಚಾತ್ತಾಪ ಪಡುವುದಕ್ಕಾಗಿ ಅವರು ಜೀವಾವಧಿ ಶಿಕ್ಷೆಗೆ ಅರ್ಹರು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಬೆಂಗಳೂರು, ಮಂಡ್ಯದಲ್ಲಿ ಭೂಕಂಪನ: ಕಿಟಕಿ, ಪೀಠೋಕರಣಗಳು ಗಡಗಡ- ಭಾರಿ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ