ನನ್ನ ಪತಿಗೆ ಕೋಪ ಜಾಸ್ತಿ. ಕೋಪಕ್ಕೆ ಅವರ ತಂದೆ ತಾಯಿಯರೇ ಅವರಿಗೆ ಹೆದರುತ್ತಾರೆ. ನನ್ನ ಮೇಲೆ ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಾರೆ. ಬೇಕಾ ಬಿಟ್ಟಿ ಹೊಡೆಯುತ್ತಾರೆ. ಎಷ್ಟೋ ಸಲ ಪ್ರಾಣ ಹೋಗುವಂತೆ ಕತ್ತು ಹಿಚುಕಲು ಬಂದಿದ್ದಾರೆ. ಜೊತೆಗೆ ವಿಪರೀತವಾಗಿ ಕುಡಿತವೂ ಇದೆ. ಆದರೆ ಆಫೀಸಿನಲ್ಲಿ ಒಳ್ಳೆಯ ಹೆಸರಿದೆ.
ನನಗೆ ಒಳ್ಳೊಳ್ಳೆಯ ಗಿಫ್ಟ್ ಕೊಡಿಸಿದ್ದಾರೆ. ಬೇರೆಯವರ ಎದುರು ಮುದ್ದು ಮಾಡುತ್ತಾರೆ. ವಿದೇಶ ಎಲ್ಲಾ ಸುತ್ತಿಸಿದ್ದಾರೆ. ಹೊರಗಿನವರಿಗೆ ನನ್ನ ಕಷ್ಟ ಗೊತ್ತಾಗುವುದಿಲ್ಲ, ಅವರೆಲ್ಲರೂ ದೇವರು ಎನ್ನುತ್ತಾರೆ. ಆದರೆ ರಾಕ್ಷಸನ ಥರ ಇರುವ ಅವರ ಜೊತೆ ಬಾಳಲು ಆಗುತ್ತಿಲ್ಲ. ನನಗೆ ಅವರಿಂದ ಪ್ರಾಣ ಭಯವಿದೆ. ನಾನು ಅವರ ಮನೆಯಿಂದ ತಪ್ಪಿಸಿಕೊಂಡು ಹೊರಗೆ ಬಂದು ಬೇರೆ ಊರಲ್ಲಿ ಬಚ್ಚಿಟ್ಟಿಕೊಂಡಿದ್ದೇನೆ. ಬೇರೆ ಪಿ.ಜಿ ಯಲ್ಲಿ ಇರೋಣ ಎಂದುಕೊಂಡಿದ್ದೇನೆ. ಅದಕ್ಕೆ ಅವರು ‘ನೀನು ನನ್ನನ್ನು ಬಿಟ್ಟು ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೆದರಿಸುತ್ತಿದ್ದಾರೆ. ನನ್ನ ಆಫೀಸಿನ ಹತ್ತಿರ ಬಂದು ಕೂಗಾಡಿ ಅವಮಾನ ಮಾಡುತ್ತಾರೆ. ನಾನು ಏನು ಮಾಡುವುದು?
ಉತ್ತರ : ನೀವು ಹೆದರಬೇಡಿ. ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದಿಂದ ಪ್ರೊಟೆಕ್ಷನ್ ಆರ್ಡರ್ ಪಡೆದುಕೊಳ್ಳಿ. ನೀವು ವಾಸ ಇರುವ ಕಡೆ ,ಕೆಲಸ ಮಾಡುವ ಕಡೆ ಆತ ಬರಬಾರದೆನ್ನುವ ಆದೇಶವನ್ನು ಪಡೆದುಕೊಳ್ಳಿ. ವ್ಯಕ್ತಿಯಿಂದ ಜೀವಕ್ಕೆ ಅಪಾಯ ಇರುವಾಗ , ಅವರು ಕೊಡುವ ಹಿಂಸೆಯನ್ನು ಸಹಿಸಿಕೊಂಡು ಬದುಕುವುದರಲ್ಲಿ ಅರ್ಥವಿಲ್ಲ.
ಯಾವುದೇ ಪ್ರಾಣಿಗೆ ಹೊಡೆಯುವುದೂ ಸರಿಯಲ್ಲದೇ ಇರುವಾಗ, ನಿಮ್ಮನ್ನು ನಿಮ್ಮ ಪತಿ ಹೊಡೆಯಲು ಬಯ್ಯಲು ಯಾವ ಅಧಿಕಾರವೂ ಅವರಿಗೆ ಇರುವುದಿಲ್ಲ. ನೀವು ಇಷ್ಟು ದಿನ ನಿಮ್ಮ ಮೇಲೆ ಹಿಂಸೆ ಮಾಡಲು ಅವಕಾಶ ಕೊಟ್ಟಿದ್ದೇ ತಪ್ಪು. ನೀವು ಒಂದು ವಸ್ತುವಲ್ಲ ಒಬ್ಬ ವ್ಯಕ್ತಿ ಎನ್ನುವುದನ್ನು ಮರೆಯದಿರಿ. ಕೂಡಲೇ ಕಾನೂನು ಕ್ರಮ ಪ್ರಾರಂಭಿಸಿ. ಬೇಕಿದ್ದರೆ ಕ್ರೂರತೆಯ ಆಧಾರದ ಮೇಲೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸ ಬಹುದು.
ನಿಮ್ಮ ಪತಿಯ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದುದು ಆತನಿಗೆ ಸಂಬಂಧಿಸಿದ್ದು. ನಿಮ್ಮನ್ನು ಹೊಡೆದು ಬಡೆದು ಬೈದಾಡಿ ನಿಮ್ಮ ಪತಿ ಸಂತೋಷ ಪಟ್ಟು ಕೊಳ್ಳಲು ನೀವು ಅವರ ಜೊತೆ ಇರಬೇಕಾಗಿಲ್ಲ. ಇದು ಅಮಾನವೀಯತೆಯ ಪರಮಾವಧಿ. ನೀವು ನಿಮ್ಮ ರಕ್ಷಣೆಯ ಬಗ್ಗೆ ಮೊದಲಿಗೆ ಯೋಚಿಸಿ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ:
ಮಗುವನ್ನು ದತ್ತು ಪಡೆದುಕೊಳ್ಳಲು ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?
ದಂಪತಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿ ಸ್ವಂತ ತಮ್ಮನ ಮಕ್ಕಳಿಗೆ ಹೋಗುತ್ತಾ? ಅದಕ್ಕಾಗಿ ಏನು ಮಾಡಬೇಕು?
ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು