ಬೆಂಗಳೂರು: ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿ ಪಾಲನೆ ಮಾಡಬೇಕು, ಹಿಜಾಬ್ ಧರಿಸಿ ತರಗತಿಯ ಒಳಗೆ ಹೋಗುವುದು ಸಲ್ಲದು ಎಂದು ಹೈಕೋರ್ಟ್ ತೀರ್ಪು ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ವಿದ್ಯಾರ್ಥಿನಿಯರು ಹಾಗೂ ಪಾಲಕರು ಶಾಲಾ-ಕಾಲೇಜುಗಳಲ್ಲಿ ಗದ್ದಲ ಎಬ್ಬಿಸುತ್ತಲೇ ಇದ್ದಾರೆ. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ, ಕೆಲವು ಮುಸ್ಲಿಂ ಸಂಘಟನೆಗಳು ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಜತೆಗೆ ತೀರ್ಪು ನೀಡಿರುವ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಕೆಲವರು ನೀಡಿದ್ದರು.
ಇದೀಗ ಈ ಸಂಘಟನೆಗಳು ಪೇಚಿಗೆ ಸಿಲುಕಿವೆ. ಇದಕ್ಕೆ ಕಾರಣ, ಹಿಜಾಬ್ ವಿಚಾರದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿದ್ದ ಸಂಘಟನೆಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ದಾಖಲು ಮಾಡುವಂತೆ ಕೋರಿ ವಕೀಲರೊಬ್ಬರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಂದ್ಗೆ ಕರೆ ನೀಡಿದ್ದ ಏಳು ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ರಿಜಿಸ್ಟ್ರಾರ್ ಜನರಲ್ಗೆ ವಕೀಲ ಎನ್.ಪಿ.ಅಮೃತೇಶ್ ಅವರು ಮಾಡಿದ್ದಾರೆ. ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್), ಕರ್ನಾಟಕದ ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್ ಸಂಘಟನೆ, ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್ಮೆಂಟ್ ಆಫ್ ಇಂಡಿಯಾ (ಎಸ್ ಸಿಎಂಐ), ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್, ಬೆಂಗಳೂರಿನ ಕಲೆಕ್ಟಿವ್, ಕರ್ನಾಟಕ ವಿದ್ಯಾರ್ಥಿನಿ ಇಸ್ಲಾಮಿಕ್ ಸಂಘಟನೆ, ಕರ್ನಾಟಕದ ಸಗೀರ್ ಅಹ್ಮದ್ ರಶ್ದಿ ಇಮರತ್ ಇ-ಶರಿಯತ್ ಮತ್ತಿತರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಉದ್ದೇಶದಿಂದ ಹಿಜಾಬ್ ಪ್ರಕರಣದಲ್ಲಿ ತೀರ್ಪನ್ನು ಟೀಕಿಸಲಾಗಿದೆ. ನ್ಯಾಯಾಲಯದ ಘನತೆ ಕುಂದಿಸುವ, ನೇರವಾಗಿ ಪೂರ್ವಾಗ್ರಹ ಪೀಡಿತಗೊಳಿಸುವ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲಾಗಿದೆ. ತೀರ್ಪು ನೀಡಿರುವ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಲಾಗಿದೆ. ಕೆಲವರು ಮುಖ್ಯ ನ್ಯಾಯಮೂರ್ತಿ ಸೇರಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿಗೆ ಕೊಲೆ ಬೆದರಿಕೆಯನ್ನು ಕೂಡ ಹಾಕಿರುವ ಘಟನೆ ನಡೆದಿದೆ. ನ್ಯಾಯಾಲಯದ ತೀರ್ಪು, ನ್ಯಾಯಮೂರ್ತಿಗಳನ್ನು ಟೀಕಿಸಿರುವ ಅರ್ಜಿದಾರರ ವಿರುದ್ದ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ದಾಖಲು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!