More

    ದಾರಿ ತಪ್ಪಿಸುವ ಜಾಹೀರಾತು: ಕೊನೆಗೂ ತಪ್ಪೊಪ್ಪಿಕೊಂಡು ಸುಪ್ರೀಂಕೋರ್ಟ್​ ಮುಂದೆ ಕ್ಷಮೆಯಾಚಿಸಿದ ಪತಂಜಲಿ

    ನವದೆಹಲಿ: ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಸುಪ್ರೀಂಕೋರ್ಟ್​ ಛೀಮಾರಿ ಹಾಕಿದ ಬೆನ್ನಲ್ಲೇ ಪತಂಜಲಿ ಆಯುರ್ವೇದ ಕಂಪನಿ ಉನ್ನತ ನ್ಯಾಯಾಲಯದ ಬಳಿ ಕ್ಷಮೆ ಕೋರಿದೆ.

    ಪತಂಜಲಿ ಕಂಪನಿಯ ಮ್ಯಾನೇಜಿಂಗ್​ ಡೈರೆಕ್ಟರ್​ ಆಚಾರ್ಯ ಬಾಲಕೃಷ್ಣ ಅವರು ಗುರುವಾರ ಸುಪ್ರೀಂಕೋರ್ಟ್​ಗೆ ಅಫಿಡೆವಿಟ್​ ಸಲ್ಲಿಸಿದ್ದು, ತಮ್ಮ ತಪ್ಪು ಜಾಹಿರಾತುಗಳ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದಾರೆ. ಆಯುರ್ವೇದದ ಮೂಲಕ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸುವ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ನಮ್ಮ ಪತಂಜಲಿ ಕಂಪನಿಯ ಅನ್ವೇಷಣೆಯಾಗಿದೆ ಎಂದು ಸ್ಪಷ್ಟಪಡಿಸಿರುವ ಬಾಲಕೃಷ್ಣ, ಭವಿಷ್ಯದಲ್ಲಿ ಇಂತಹ ತಪ್ಪು ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಶೋಕಾಸ್ ನೋಟಿಸ್‌ಗೆ ಪತಂಜಲಿ ಕಂಪನಿಯು ತ್ವರಿತ ಪ್ರತಿಕ್ರಿಯೆ ನೀಡಿದೆ. ಎರಡು ವಾರಗಳ ಅವಧಿಯಲ್ಲಿ ಖುದ್ದು ಹಾಜರಾಗುವಂತೆ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯದ ಸೂಚನೆಗಳನ್ನು ಉಲ್ಲಂಘಿಸಿದ ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಕೋರ್ಟ್​ ಕೇಳಿದ್ದಕ್ಕೆ ಪತಂಜಲಿ ಕಂಪನಿ ಬೇಷರತ್​ ಕ್ಷಮೆಯಾಚಿಸಿತು.

    ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್​ ಒಡೆತನದ ಪತಂಜಲಿ ಆಯುರ್ವೇದ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್​, ಕಳೆದ ಫೆ.27ರಂದು ನ್ಯಾಯಾಂಗ ನಿಂದನೆ ನೋಟಿಸ್​ ಜಾರಿ ಮಾಡಿತು. ಮುಂದಿನ ಆದೇಶದವರೆಗೆ ಪಂತಜಲಿ ತನ್ನ ಔಷಧೀಯ ಉತ್ಪನ್ನಗಳ ಯಾವುದೇ ಜಾಹೀರಾತು ನೀಡದಂತೆ ನ್ಯಾಯಾಲಯ ನಿರ್ಬಂಧಿಸಿತ್ತು.

    ತನ್ನ ಜಾಹೀರಾತುಗಳಲ್ಲಿ ಅಲೋಪತಿ ವಿರುದ್ಧ ಪತಂಜಲಿ ಕಂಪನಿ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸುಪ್ರೀಂ ಕೋರ್ಟ್​ಗೆ ಅರ್ಜಿ ದಾಖಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಹೀರಾತುಗಳ ವಿರುದ್ಧ ಆದೇಶ ಹೊರಡಿಸಿತ್ತು. ಆದಾಗ್ಯೂ ಆದೇಶವನ್ನು ಪತಂಜಲಿ ಉಲ್ಲಂಘಿಸಿದ್ದು, ಇದರಿಂದ ಆಕ್ರೋಶಗೊಂಡ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್​ ನೀಡಿ, ಉತ್ತರಿಸುವಂತೆ ತಾಕೀತು ಮಾಡಿತ್ತು. ಅಲ್ಲದೆ, ದಾರಿತಪ್ಪಿಸುವ ಜಾಹೀರಾತುಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಅವರು ಖಡಕ್​ ಎಚ್ಚರಿಕೆ ನೀಡಿದ್ದರು.

    ಕೋವಿಡ್-19 ವ್ಯಾಕ್ಸಿನೇಷನ್ ವಿರುದ್ಧ ಪತಂಜಲಿ ಅಭಿಯಾನ ನಡೆಸಿದೆ ಎಂದು ಆರೋಪಿಸಿ ಐಎಂಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ನವೆಂಬರ್​ನಲ್ಲಿ ನಡೆದಿತ್ತು. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ಸಮಾಲೋಚನೆ ನಡೆಸಿ, ದಾರಿತಪ್ಪಿಸುವ ಜಾಹೀರಾತುಗಳನ್ನು ಎದುರಿಸಲು ಕೆಲವು ಶಿಫಾರಸುಗಳೊಂದಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತ್ತು.

    ಯೋಗದ ಸಹಾಯದಿಂದ ಮಧುಮೇಹ ಮತ್ತು ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿ ಪತಂಜಲಿಯು ಎಂದು ಹೇಳಿಕೊಂಡಿದೆ. ಅಲ್ಲದೆ, ತನ್ನ ಕಂಪನಿಯ ಉತ್ಪನ್ನಗಳನ್ನು ಬಳಸಿದರೆ ನಿರ್ದಿಷ್ಟ ಕಾಯಿಲೆ ಗುಣವಾಗುತ್ತದೆ ಎಂದು ಸಹ ಪತಂಜಲಿ ಹೇಳಿಕೊಂಡಿತ್ತು. ಅಲ್ಲದೆ, ಆಲೋಪತಿ ಚಿಕಿತ್ಸಾ ವಿಧಾನದ ಬಗ್ಗೆ ತಪ್ಪು ಮಾಹಿತಿ ಹರಡಿದ್ದರಿಂದ ಭಾರತೀಯ ವೈದ್ಯಕೀಯ ಸಂಘ ಕೋರ್ಟ್​ ಮೆಟ್ಟಿಲೇರಿತ್ತು. (ಏಜೆನ್ಸೀಸ್​)

    ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಎಂಬಿಬಿಎಸ್​ ಮುಗಿಸಬೇಕಾದ್ರೆ ಹಾಸ್ಟೆಲ್​ನಲ್ಲಿ ಹುಡುಗರ ಜತೆ ಇರಬೇಕಂತೆ! ವಿದೇಶದಲ್ಲಿ ಭಾರತೀಯ ಯುವತಿಯ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts