ನವದೆಹಲಿ: ದೆಹಲಿ ಪೊಲೀಸರು ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರದಲ್ಲಿ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವ ಪಂಜಾಬಿ ನಟ, ನಟ ದೀಪ್ ಸಿಧು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ತಡೆಯುವ ಕಾಯ್ದೆ ಸೇರಿದಂತೆ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಉಳಿದಿರುವ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಪ್ರಕರಣ (307), ಸೆಕ್ಷನ್ 152 ರ ಅಡಿಯಲ್ಲಿ ದಂಗೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾಗ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪಗಳ ಅಡಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಗಲಭೆಗೆ ಕುಮ್ಮಕ್ಕು ನೀಡುವ ಆರೋಪದ ಕುರಿತು ಬಹಿರಂಗಗೊಳ್ಳುತ್ತಿದ್ದಂತೆಯೇ ನಟ ದೀಪ್ ಸಿಧು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ಪ್ರಚೋದಿತ ಭಾಷಣ ಮಾಡಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಸಂಘಟನಗೆಳು ಆರೋಪಿಸಿವೆ. ಇತ್ತ ಅವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದರೆ, ಅತ್ತ ಎಸ್ಕೇಪ್ ಆಗಿದ್ದಾರೆ.
ಇವರು ಪರಾರಿಯಾಗುತ್ತಿದ್ದಾರೆ ಎನ್ನಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದೀಪ್ ಸಿಧು ಅವರೇ ಮೊದಲು ಟ್ರ್ಯಾಕ್ಟರ್ನಲ್ಲಿ ಕುಳಿತು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅವರ ಸುತ್ತಲೂ ರೈತರು ಇರುವುದು ಕಾಣಿಸುತ್ತದೆ. ಜನರು ಬರುತ್ತಿದ್ದಂತೆಯೇ ದೀಪ್ ಟ್ರ್ಯಾಕ್ಟರ್ ಬಿಟ್ಟು ಓಡಿಹೋಗಿದ್ದಾರೆ. ಇದು ಒಂದು ವಿಡಿಯೋದಲ್ಲಿ ಇದ್ದರೆ, ಇನ್ನೊಂದರಲ್ಲಿ, ಅಂದರೆ ಈ ವಿಡಿಯೋದ ಮುಂದುವರೆದ ಭಾಗವಾಗಿ ಬೈಕ್ ಹತ್ತಿಕೊಂಡು ದೀಪ್ ಸಿಧು ಎಸ್ಕೇಪ್ ಆಗುವ ದೃಶ್ಯವಿದೆ. ಇಲ್ಲಿಂದ ನಂತರ ದೀಪ್ ಸಿಧು ನಾಪತ್ತೆಯಾಗಿದ್ದಾರೆ. ಇನ್ನು ಈ ಎರಡು ವಿಡಿಯೋಗಳು ಕೆಂಪುಕೋಟೆಯಲ್ಲಿ ದಾಂಧಲೆ ಆದ ನಂತರದ ದೃಶ್ಯವೇ ಅಥವಾ ಅದಕ್ಕೂ ಮುನ್ನದ ದೃಶ್ಯವೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಈ ನಡುವೆ, ಕೆಂಪು ಕೋಟೆ ಬಳಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಜ.27 ರಿಂದ ಜ.31 ವರೆಗೂ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.