ದೇವದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ರನ್ನು ಬಂಧನ ಖಂಡಿಸಿ ಎಪಿಪಿ ಕಾರ್ಯಕರ್ತರು ಇಲ್ಲಿನ ಮಿನಿವಿಧಾನಸೌಧ ಮುಂಭಾಗ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ಕುಲಕರ್ಣಿಗೆ ಸೋಮವಾರ ಮನವಿ ಸಲ್ಲಿಸಿದರು.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ. ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದ್ದ ತನಿಖಾ ಸಂಸ್ಥೆಗಳನ್ನು ತನ್ನ ಪಂಜರದ ಗಿಳಿಮಾಡಿಕೊಂಡಿದೆ ಎಂದು ಆರೋಪಿಸಿದರು.
ಅಬಕಾರಿ ನೀತಿ ಹಗರಣದ ನೆಪಮಾಡಿ ದೆಹಲಿ ಸರ್ಕಾರಕ್ಕೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಎಪಿಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಷ್ ಸಿಸೋಡಿಯಾ, ಸಂಜಯ ಸಿಂಗ್ನನ್ನು ಸಂವಿಧಾನ ವಿರೋಧವಾಗಿ ಬಂಧಿಸಲಾಗಿದೆ. 800 ಅಧಿಕಾರಿಗಳು ಸುಮಾರು 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದರೂ ಬಿಡಿಗಾಸು ಸಿಕ್ಕಿಲ್ಲ. ಕೊನೇ ಅಸ್ತ್ರ ಎನ್ನುವಂತೆ ಸಿಎಂ ಕೇಜ್ರಿವಾಲ್ರನ್ನು ಬಂಧಿಸಿದೆ ಎಂದು ದೂರಿದರು.
ಕೂಡಲೇ ರಾಷ್ಟ್ರಪತಿ ಅವರು ಮಧ್ಯ ಪ್ರವೇಶ ಮಾಡಿ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಅಕ್ರಮವಾಗಿ ಬಂಧಿಸಿರುವ ಸಿಎಂ ಕೇಜ್ರಿವಾಲ್, ಆಪ್ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.