ಮೈಸೂರು: ನಗರದ ಪಾಂಡವಪುರ ಮೂಲದ ರವೀಶ್ ಎಂಬ ಯುವಕನ ಕೊಲೆ ಮಾಡಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ.
ಇಲವಾಲ ಬಳಿ ರವೀಶ್ ಎಂಬ ಯುವಕನ ಕೊಲೆ ಪ್ರಕರಣ ಇದಾಗಿದೆ. ಜೂ.9 ರ ರಾತ್ರಿ ಇಲವಾಲ ಆದಿಶ್ವರ ನಗರದಲ್ಲಿ ಯುವಕನ ಕೊಲೆಯಾಗಿತ್ತು. ಈ ಸಂಬಂಧ ಜೂ.10 ರಂದು ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೊಲೆ ಮಾಡಿದ್ದು ಯಾರು ಎಂದು ಮಾತ್ರ ಪೊಲೀಸರಿಗೆ ತಿಳಿದಿರಲಿಲ್ಲ.
ನಂತರ ಕೊಲೆಯಾದ ರವೀಶ್ನ ಮೊಬೈಲ್ ನೋಡಿದಾಗ ಅಂಕುಡೊಂಕು ಪಟ್ಟಿಯಿರುವ ಫೋಟೋ ಒಂದು ಕಾಣಿಸಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಶೂಸ್ ಎಂದು ತಿಳಿದಿದೆ. ಬಹುಶಃ ಕೊಲೆಯಾದ ಸಂದರ್ಭದಲ್ಲಿ ಅಚಾನಕ್ ಆಗಿ ಇಲ್ಲವೇ ಉದ್ದೇಶಪೂರ್ವಕವಾಗಿ ತೆಗೆದಿರುವ ಫೋಟೋ ಇದಾಗಿರಬಹುದು. ಆ ಫೋಟೋ ಕ್ಲಿಕ್ ಆಗಿರುವ ದಿನಾಂಕ ಹಾಗೂ ಕೊಲೆಯಾಗಿರುವ ದಿನಾಂಕವನ್ನು ತಾಳೆಹಾಕಿದ ಪೊಲೀಸರು ಆ ಫೋಟೋದ ಬೆನ್ನತ್ತಿ ಹೋಗಿದ್ದಾರೆ.
ಕಪ್ಪು ಬಣ್ಣದ ಶೂ ಮೇಲೆ ಬಿಳಿ ರೇಡಿಯಂ ರೀತಿಯ ಅಂಕುಡೋಂಕಾದ ಪಟ್ಟಿ ಇರುವ ಆ ಶೂಸ್ ಕುರಿತು ರವೀಶನ ಪರಿಚಯಸ್ಥರನ್ನ ಕರೆದು ವಿಚಾರಣೆ ನಡೆಸಿದಾಗ ಅದು ರವೀಶ್ ಸ್ನೇಹಿತ ತೇಜ್ಮಾಲ್ ಎಂಬುವವನ ಶೂಸ್ ಎಂದು ತಿಳಿದಿದೆ. ನಂತರ ತೇಜ್ಪಾಲ್ನನ್ನು ಕರೆತಂದು ವಿಚಾರಣೆ ನಡೆಸಿದಾಗ ಕೊನೆಗೂ ಆತ ತಾನೇ ಕೊಲೆ ಮಾಡಿರುವ ಸತ್ಯ ಒಪ್ಪಿಕೊಂಡಿದ್ದಾನೆ.
ತೇಜ್ಮಾಲ್ , ರವೀಶ್ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪಾಲುದಾರಿಕೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಹಣಕಾಸು ವಿಚಾರದಲ್ಲಿ ಮನಸ್ತಾಪ ಬಂದು ತನ್ನ ಪಾಲು ಕೊಡುವಂತೆ ರವೀಶ್ ಕೇಳಿದ್ದ. ಇದರಿಂದ ರೊಚ್ಚಿಗೆದ್ದಿದ್ದ ತೇಜ್ಪಾಲ್ ಆತನನ್ನು ಕೊಲೆ ಮಾಡುವ ಸ್ಕೆಚ್ ಹಾಕಿದ್ದ. ನಂತರ ತನ್ನ ಸ್ನೇಹಿತ ಪ್ರಕಾಶ್ ಜತೆ ಸೇರಿ ರವೀಶ್ ಕೊಲೆ ಮಾಡಿರುವ ವಿಷಯ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ತನಿಖೆ ಮುಂದುವರೆದಿದೆ.
VIDEO: ವಿಶ್ವ ದಾಖಲೆ ಸೇರಿತು ಈಕೆಯ ಎಂಟು ಇಂಚು ರೆಪ್ಪೆ- ಹೀಗಾಗಲು ಕಾರಣ ಪರ್ವತದಲ್ಲಿನ ಬುದ್ಧನಂತೆ!
VIDEO: ಪಾಕ್ನಲ್ಲಿ ಕತ್ತೆಗಳ ಸಂಖ್ಯೆ ದಿಢೀರ್ ಹೆಚ್ಚಳ: ಪ್ರಧಾನಿ ಇಮ್ರಾನ್ಗೆ ಪ್ರತಿಪಕ್ಷಗಳಿಂದ ಭಾರಿ ಮುಜುಗರ