ಬೆಂಗಳೂರು : ವಿಡಿಯೋ ಕಾಲ್ನಲ್ಲಿ ಅಶ್ಲೀಲ ದೃಶ್ಯ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡಿ ಯುವಕನ ಆತ್ಮಹತ್ಯೆಗೆ ಕಾರಣರಾದ ಇಬ್ಬರು ಸೈಬರ್ ಸುಲಿಗೆಕೋರರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಭರತ್ಪೂರ್ ಜಿಲ್ಲೆ ರಸೂಲಪೂರ್ ಗ್ರಾಮದ ರಾಬಿನ್ (22) ಮತ್ತು ಜಾವೇದ್ (25) ಬಂಧಿತರು. ಈ ಇಬ್ಬರ ಬ್ಲ್ಯಾಕ್ಮೇಲ್ಗೆ ನೊಂದು ಭಟ್ಟರಹಳ್ಳಿಯ ಎಂಬಿಎ ಪದವೀಧರ ಬಿ.ಎಸ್. ಅವಿನಾಶ್ ಅಲಿಯಾಸ್ ಅಭಿ ಗೌಡ (26) ಮಾ.23ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಎಂ. ಅಂಬರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ವೈಟ್ಫೀಲ್ಡ್ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಎಂಬಿಎ ಪದವಿ ಮುಗಿಸಿ ಅವಿನಾಶ್, ಐಎಎಸ್ ಪ್ರಿಲೀಮ್ಸ್ ಪಾಸ್ ಮಾಡಿ ಕೆ.ಆರ್.ಪುರದಲ್ಲಿ ಐಎಎಸ್ ಕೋಚಿಂಗ್ಗೆ ಹೋಗುತ್ತಿದ್ದ. ಇದರ ನಡುವೆ ಯುವತಿ ಹೆಸರಿನಲ್ಲಿ ರಾಬಿನ್ ಮತ್ತು ಜಾವೇದ್ ಫೇಸ್ಬುಕ್ ಖಾತೆ ತೆರೆದು ಅವಿನಾಶ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಿದ್ದರು.
ಮೆಸೆಂಜರ್ನಲ್ಲಿ ಚಾಟ್ ಶುರು ಮಾಡಿ ಆತ್ಮೀಯತೆ ಬೆಳೆಸಿಕೊಂಡು ಹುಡುಗಿಯಂತೆ ಸಂಭಾಷಣೆ ಮಾಡಿ ಅವಿನಾಶ್ಗೆ ನಂಬಿಸಿದ್ದರು.
ಅಶ್ಲೀಲ ಸಂಭಾಷಣೆ ಮಾಡುತ್ತಿದ್ದ ವಂಚಕರು, ವಿಡಿಯೋ ಕಾಲ್ ಮಾಡಿ ಮತ್ತೊಂದು ಮೊಬೈಲ್ನಲ್ಲಿ ಸಂಗ್ರಹಿಸಿದ್ದ ಯುವತಿ ನಗ್ನ ವಿಡಿಯೋವನ್ನು ತೋರಿಸಿದ್ದರು. ಅವಿನಾಶ್ಗೂ ಬಟ್ಟೆ ಬಿಚ್ಚುವಂತೆ ಪ್ರೇರೆಪಿಸಿ ನಗ್ನ ಮಾಡಿ ಸ್ಕ್ರೀನ್ ರಿಕಾರ್ಡ್ ಮಾಡಿಕೊಂಡಿದ್ದರು.
ಬಳಿಕ ಅವಿನಾಶ್ಗೆ ಫೇಸ್ಬುಕ್ ಪೆಸೆಂಜರ್ನಲ್ಲಿ ಖಾಸಗಿ ವಿಡಿಯೋ ಕಳುಹಿಸಿ ಬ್ಲ್ಯಾಕ್ಮೇಲ್ಗೆ ಶುರು ಮಾಡಿದ್ದರು. ಹಣ ಕೊಡದಿದ್ದರೇ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ನಿಮ್ಮ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಗೊತ್ತಾಗುವಂತೆ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಹೆದರಿ ಅವಿನಾಶ್, ಸ್ನೇಹಿತರ ಬಳಿಕ ಸಾಲ ಪಡೆದು 36,680 ರೂ. ಸುಲಿಗೆಕೋರರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಜಮೆ ಮಾಡಿದ್ದ.
ಆದರೆ, ಸೈಬರ್ ಕಳ್ಳರು ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿದ್ದರು. ಹಣ ಇಲ್ಲದೆ ಇದ್ದಾಗ ಆರೋಪಿಗಳು ಅವಿನಾಶ್ಗೆ ಅಶ್ಲೀಲ ವಿಡಿಯೋವನ್ನು ಜಾಲತಾಣ ಮತ್ತು ನಿಮ್ಮ ಸ್ನೇಹಿತರ, ಕುಟುಂಬ ಸದಸ್ಯರ ವಾಟ್ಸ್ಆ್ಯಪ್ಗೆ ಕಳುಹಿಸುವುದಾಗಿ ಕಿರುಕುಳ ನೀಡುತ್ತಿದ್ದರು. ನೊಂದ ಅವಿನಾಶ್, ಮರ್ಯಾದೆಗೆ ಅಂಜಿ ಮಾ.23ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಬೆಳಗ್ಗೆ ಮಗನ ಸಾವಿನಿಂದ ಪಾಲಕರು ಆಘಾತಕ್ಕೆ ಒಳಗಾಗಿದ್ದರು. ಸ್ನೇಹಿತನ ಸಾವಿನ ಸುದ್ದಿ ತಿಳಿದು ಮನೆಯ ಬಳಿ ಬಂದಿದ್ದರು. ಈ ವೇಳೆ ಅವಿನಾಶ್ ತುರ್ತಾಗಿ ಹಣ ಪಡೆದಿದ್ದ ಎಂದು ಪಾಲಕರ ಬಳಿ ಆತನ ಗೆಳೆಯರು ತಿಳಿಸಿದ್ದರು. ಅವಿನಾಶ್ ಸಾವಿನ ಮೇಲೆ ಪಾಲಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಮೂರು ದಿನಗಳ ಬಳಿಕ ಯುವತಿ ಹೆಸರಿನಲ್ಲಿ ಮೃತ ಯುವಕನ ಅಕ್ಕನ ಮೊಬೈಲ್ಗೆ ಮೇಸೆಂಜರ್ನಲ್ಲಿ ಸಂದೇಶ ಕಳುಹಿಸಿ ಅವಿನಾಶ್ ಕುರಿತು ವಿಚಾರಿಸಿದ್ದರು.
ಅವಿನಾಶ್ ಸಾವಿನ ಹಿಂದೆ ಕಾಣದ ಕೈಗಳು ಇರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಸೈಬರ್ ಸುಲಿಗೆಕೋರರ ಬ್ಲ್ಯಾಕ್ಮೇಲ್ ಇರುವುದು ಗೊತ್ತಾಗಿತ್ತು. ತನಿಖೆ ಚುರುಕುಗೊಳಿಸಿದ ಇನ್ಸ್ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ರಾಜಸ್ಥಾನಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ಕರೆತಂದಿದೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಸಂದೇಶ ಕಳುಹಿಸಿ ಸಿಕ್ಕಬಿದ್ದರು :
ಮಾ.25ರ ಸಂಜೆ 4 ಗಂಟೆಗೆ ಅವಿನಾಶ್ ಸಹೋದರಿ ಫೇಸ್ಬುಕ್ ಖಾತೆಗೆ ನೇಹಾ ಶರ್ಮಾ ಹೆಸರಿನಲ್ಲಿ ಆರೋಪಿಗಳು ಸಂದೇಶ ಕಳುಹಿಸಿ, ಮೊಬೈಲ್ ನಂಬರ್ ಕೇಳಿದ್ದರು. ಅನುಮಾನ ಬಂದು ಮೃತನ ಅಕ್ಕ, ತಮ್ಮನ ನಂಬರ್ ಬದಲಿಗೆ ಅಕ್ಕನ ಮಗ ಅನಿಲ್ ಮೊಬೈಲ್ ನಂಬರ್ ಕೊಟ್ಟಿದ್ದರು. ಅವಿನಾಶ್ ಎಂದು ತಿಳಿದು ಅನಿಲ್ ಜತೆಗೆ ಸುಲಿಗೆಕೋರರ ಅಶ್ಲೀಲ ವಿಡಿಯೋ ಬ್ಲ್ಯಾಕ್ಮೇಲ್ ಪ್ರಸ್ತಾಪಿಸಿ ಬ್ಲ್ಯಾಕ್ಮೇಲ್ ಮಾಡಿದಾಗ ಬೆಳಕಿಗೆ ಬಂದಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ೇಸ್ಬುಕ್, ಮೊಬೈಲ್ ನಂಬರ್ ಆಧರಿಸಿ ಬಂಧಿಸಿದ್ದಾರೆ.
ಊರು ಊರೇ ಸೈಬರ್ ಕಳ್ಳರು
ರಾಜಸ್ಥಾನ ಭರತ್ಪೂರ್ ಜಿಲ್ಲೆಯ ರಸೂಲಪೂರ್ ಗ್ರಾಮದ ತುಂಬ ಸೈಬರ್ ಕಳ್ಳರೇ ತುಂಬಿದ್ದಾರೆ. ಬಂಧಿತರು ಸೇರಿದಂತೆ ಬಹುತೇಕರು ಪ್ರಾಥಮಿಕ ಶಾಲೆಯವರೆಗೆ ಮಾತ್ರ ವ್ಯಾಸಂಗ ಮಾಡಿ ಸೈಬರ್ ಅಪರಾಧವನ್ನೇ ವೃತ್ತಿ ಮಾಡಿಕೊಂಡಿದ್ದರು. 1 ಕಂಪ್ಯೂಟರ್, 1 ಲ್ಯಾಪ್ಟಾಪ್, ಮೊಬೈಲ್ ಇಟ್ಟುಕೊಂಡು ಮನೆ, ಮರದ ಕೆಳಗೆ, ಕಾಡು, ಬಯಲು ಪ್ರದೇಶ ಎನ್ನದೆ ನೆಟ್ವರ್ಕ್ ಎಲ್ಲಿ ಸಿಗುತ್ತೋ ಅಲ್ಲಿ ಕುಳಿತು 20 ರಿಂದ 25 ವರ್ಷ ವಯಸ್ಸಿನ ಯುವಕರಿಗೆ ಬಲೆಬೀಸುತ್ತೆ.
ಯುವತಿ ಹೆಸರಿನಲ್ಲಿ ಸ್ನೇಹ ಬೆಳೆಸಿ ಅಶ್ಲೀಲ ವಿಡಿಯೋ ತೋರಿಸಿ ಯುವಕರ ನಗ್ನ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ಮೇಲ್ ಶುರು ಮಾಡುತ್ತಾರೆ. ಯಾರು ಹೆದರಿ ಹಣ ಕೊಡುತ್ತಾರೋ ಅವರನ್ನೇ ಟಾರ್ಗೆಟ್ ಮಾಡಿ ಪದೇ ಪದೆ ಹಣ ಪಡೆಯುತ್ತಾರೆ. ಹಣ ಕೊಡದೆ ಇದ್ದವರನ್ನು ಮತ್ತೆ ಕರೆ ಮಾಡುವುದಿಲ್ಲ. 10 ದಿನಕ್ಕೊಮ್ಮೆ ಸೈಬರ್ ಕಳ್ಳರಿಗೆ ತರಬೇತಿ ಕೊಟ್ಟು ಕಮಿಷನ್ ಹಣ ಪಡೆಯುವ ಸೈಬರ್ ಗ್ಯಾಂಗ್ ಸಹ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಲತಾಣದಲ್ಲಿ ಅಪರಿಚಿತರ ಜತೆ ಸ್ನೇಹ ಬೆಳೆಸುವುದು, ಅಶ್ಲೀಲ ಸಂಭಾಷಣೆ, ವಿಡಿಯೋ ಕಾಲ್ಗೆ ಒಳಗಾಗಬೇಡಿ. ಒಳಗಾದರೇ ಮರ್ಯಾದೆಗೆ ಅಂಜಿ ಆತ್ಮಹತ್ಯೆ ನಿರ್ಧರಕ್ಕೆ ಬರಬೇಡಿ. ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ದೇವರಾಜ್-ವೈಟ್ಫೀಲ್ಡ್ ವಿಭಾಗ ಡಿಸಿಪಿ ಹೇಳಿದ್ದಾರೆ.
ಆನ್ಲೈನ್ ಮೀಟಿಂಗ್ನಲ್ಲಿ ಬೆತ್ತಲೆಯಾದ ಸಂಸದ! ಬಟ್ಟೆ ಬದಲಾಯಿಸಲು ಹೋಗಿ ಮೊಬೈಲ್ ಎದುರು ಬಂದ!
ಸಂಬಳ ಕಡಿತಕ್ಕೂ ಜಗ್ಗಲಿಲ್ಲ, ನೋಟಿಸ್ಗೂ ಬಗ್ಗಲಿಲ್ಲ: ಡ್ರೈವರ್, ಕಂಡಕ್ಟರ್ ಸೇರಿ ಸಾರಿಗೆ ಸಿಬ್ಬಂದಿ ವಜಾ
ಯಾರಿಗೆ ವಯಸ್ಸಾಗಿರತ್ತೋ ಅವ್ರು ಸಾಯ್ಲೇಬೇಕಲ್ಲಾ? ಕರೊನಾದಿಂದ ಸತ್ರೆ ಏನ್ ಮಾಡೋಕಾಗತ್ತೆ ಎಂದ ಸಚಿವ
ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!