ನವದೆಹಲಿ: ಕರೊನಾ ವೈರಸ್, ಲಾಕ್ಡೌನ್ ಅವಧಿಯಲ್ಲಿ ವರ್ಕ್ ಫ್ರಂ ಹೋಂ ಎನ್ನುವುದು ಬಹುತೇಕಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಮನೆಯಲ್ಲಿ ಇದ್ದುಕೊಂಡು ಹಲವರು ವಿಡಿಯೋ ಕಾನ್ಫರೆನ್ಸ್ಗಳಲ್ಲಿ ಮಾಡಿರುವ ಎಡವಟ್ಟುಗಳ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.
ಆದರೆ ಇಂಥ ಎಡವಟ್ಟು ಹಲವು ಕಡೆಗಳಲ್ಲಿ ವಕೀಲರಿಂದಲೂ ಆಗಿದ್ದು, ಸುಪ್ರೀಂಕೋರ್ಟ್ ಸೇರಿದಂತೆ ಕೆಲವು ಹೈಕೋರ್ಟ್ಗಳ ನ್ಯಾಯಮೂರ್ತಿಗಳು ಕಿಡಿ ಕಾರಿದ್ದಾರೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲಾ ಹೈಕೋರ್ಟ್ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ತಾವು ವಕೀಲರು ಎನ್ನುವುದನ್ನೂ ಮರೆತು ಕೆಲವರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆ ಎಂದಿರುವ ನ್ಯಾಯಮೂರ್ತಿಗಳು ವಕೀಲರ ಸ್ಥಾನಕ್ಕೆ ಮರ್ಯಾದೆ ಕೊಡಿ ಎಂದು ಬುದ್ಧಿಹೇಳಿದ್ದಾರೆ.
ಒಡಿಶಾ ಹೈಕೋರ್ಟ್ನಲ್ಲಿ ವಕೀಲರೊಬ್ಬರು ಕಾರು ಚಲಾಯಿಸಿಕೊಂಡು ವಾದ ಮಾಡುತ್ತಿದ್ದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿಸ್ವಾನಾಥ್ ರಾಥ್ ಪ್ರಶ್ನಿಸಿದಾಗ, ವಕೀಲರು ನಾನು ಇನ್ನೊಂದು ಕಡೆ ತುರ್ತಾಗಿ ವಿಚಾರಣೆಗೆ ಹೋಗಬೇಕಿದೆ. ಮನೆಯಲ್ಲಿಯೇ ಕುಳಿತು ವಾದ ಮಂಡಿಸುತ್ತಿದ್ದರೆ, ಅಲ್ಲಿಗೆ ಹೋಗುವುದು ತಡವಾಗುತ್ತದೆ ಎಂದು ಉತ್ತರಿಸಿದರು!
ಇದನ್ನೂ ಓದಿ: ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…
ಇನ್ನೊಂದು ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹೊಸದಾಗಿ ಮದುವೆಯಾಗಿರುವ ವಕೀಲರೊಬ್ಬರು ತಮ್ಮ ಪತ್ನಿಯನ್ನು ಪಕ್ಕದಲ್ಲಿಯೇ ಕುಳ್ಳರಿಸಿಕೊಂಡಿದ್ದರು. ಇದು ಕೋರ್ಟ್ಗೆ ಮಾಡುವ ಅವಮರ್ಯಾದೆ. ಪತ್ನಿಯನ್ನು ಕಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರೂ ವಕೀಲರು ಕೇಳಲಿಲ್ಲ!
ಇನ್ನೊಂದು ಪ್ರಕರಣದಲ್ಲಿ ವಕೀಲರು ಬನಿಯನ್ನಲ್ಲಿಯೇ ಇದ್ದು ತೋಟದಲ್ಲಿ ಅಡ್ಡಾಡಿಕೊಂಡು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಮೂರ್ತಿಗಳು ಅವರನ್ನು ತರಾಟೆಗೆ ತೆಗೆದುಕೊಂಡಾಗ ಮನೆಯೊಳಕ್ಕೆ ನೆಟ್ವರ್ಕ್ ಸಿಗುತ್ತಿಲ್ಲ ಎಂದರು. ನಂತರ ಈ ವಕೀಲರು ಸುಳ್ಳು ಹೇಳುತ್ತಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತರಾಟೆಗೆ ತೆಗೆದುಕೊಂಡರು. ಇನ್ನೊಬ್ಬ ವಕೀಲರು ವೀಡಿಯೊ ಕಾನ್ಫರೆನ್ಸ್ ನಡೆಯುತ್ತಿರುವಾಗಲೇ ಪ್ಲೇಟ್ನಲ್ಲಿ ತಿಂಡಿ ಇಟ್ಟುಕೊಂಡು ತಿನ್ನುತ್ತಿದ್ದರು.
ಹಿರಿಯ ವಕೀಲ ರಾಜೀವ್ ಧವನ್ ಕೂಡ ಧೂಮಪಾನ ಮಾಡುತ್ತಿದ್ದುದು ಹಾಗೂ ಇನ್ನೊಬ್ಬ ವಕೀಲ ಗುಟ್ಕಾ ತಿನ್ನುತ್ತ ವಿಚಾರಣೆಗೆ ಹಾಜರಾಗಿ ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದರು.
ಈ ಹಿಂದೆ ಟಿ-ಶರ್ಟ್ನಲ್ಲಿ ಹಾಸಿಗೆಯಲ್ಲಿ ಮಲಗಿದ್ದಾಗ ವಿಚಾರಣೆಗೆ ಹಾಜರಾಗಿದ್ದಕ್ಕಾಗಿ ವಕೀಲರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದರಿಂದ ವಕೀಲರು ಬೇಷರತ್ತಾಗಿ ಕ್ಷಮೆಯಾಚಿಸಿದರು. ಕೆಲವು ಕಡೆ ಕಪ್ಪು ಸಮವಸ್ತ್ರ ಧರಿಸಿ ವಿಚಾರಣೆಗೆ ಬರುವುದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನೇ ಬಳಸಿಕೊಂಡ ವಕೀಲರು ಮನೆಯ ಡ್ರೆಸ್ನಲ್ಲಿಯೇ ಇದ್ದರು. ಇದರಿಂದ ಕಿಡಿ ಕಾರಿದ್ದ ರಾಜಸ್ಥಾನ ಹೈಕೋರ್ಟ್, ಸಮವಸ್ತ್ರದಲ್ಲಿ ಹಾಜರಾಗುವಂತೆ ಸೂಚನೆ ನೀಡಿತ್ತು.
ಅಜ್ಜಂದಿರಿಗೆ ಗಾಳ ಹಾಕುತ್ತಾಳೆ ಸುಂದರಿ: ಎಂಟು ಮದುವೆಯಾಗಿ ಮಾಡಿದ್ದೇನು ಗೊತ್ತಾ?
ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು: ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆ