ಕೊಪ್ಪಳ: ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ 10 ದಿನಗಳಾಗುತ್ತ ಬಂದರೂ ಅವರ ಹಿಂದಿನ ಘಟನೆಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಲೇ ಇದ್ದಾರೆ.
ಫಿಟ್ ಆ್ಯಂಡ್ ಫೈನ್ ಆಗಿದ್ದ ಅಪ್ಪು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಹೇಗೆ ಏರಿದ್ದರು, ಅದನ್ನು ಕಂಡು ತಾವು ಬೆಕ್ಕಸಬೆರಗಾಗಿದ್ದನ್ನು ಪಿಎಸ್ಐ ದೊಡ್ಡಪ್ಪ ಅವರು ನೆನೆದು ದುಃಖಿತರಾಗಿದ್ದಾರೆ. ಇನ್ನು ತೆರೆ ಕಾಣಲಿರುವ ಪುನೀತ್ ಅವರು ಜೇಮ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಭದ್ರತೆ ನೀಡಿದ್ದ ದೊಡ್ಡಪ್ಪ ಅವರು ಪುನೀತ್ ಅವರೊಂದಿಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.
‘2020ರ ಅಕ್ಟೋಬರ್ ತಿಂಗಳಿನಲ್ಲಿ ಪುನೀತ್ ರಾಜ್ಕುಮಾರ್ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ನಾನಾಗ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್ಐ ಆಗಿದ್ದೆ. ಪುನೀತ್ ಅವರನ್ನು ನೋಡಲು ಹೋಗಿದ್ದೆ. ಅದು 575 ಮೆಟ್ಟಿಲುಗಳಿರುವ ಬೆಟ್ಟ. ಆರೋಗ್ಯವಂತರು, ಯುವಕರು ಕೂಡ ಇಷ್ಟೆಲ್ಲ ಮೆಟ್ಟಿಲು ಏರಲು ಸುಸ್ತಾಗುವುದು ಉಂಟು. ಇಲ್ಲವೇ ನಡುನಡುವೆ ನಿಲ್ಲುವುದು ಉಂಟು. ಆದರೆ ಅಪ್ಪು ಅವರು ಕೇವಲ 6.5 ನಿಮಿಷದಲ್ಲಿ 575 ಮೆಟ್ಟಿಲು ಸರಸರ ಏರಿಬಿಟ್ಟರು. ನಾನು ಸುಸ್ತಾಗಿ ಹೋದೆ ಎಂದು ದೊಡ್ಡಪ್ಪ ಹೇಳಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚು ಹೆಚ್ಚು ಚಿತ್ರೀಕರಣ ಮಾಡುವ ಇಂಗಿತವನ್ನು ಪುನೀತ್ ಅವರು ವ್ಯಕ್ತಪಡಿಸಿದ್ದರು. ಬೆಟ್ಟದಲ್ಲಿನ ಕೋತಿಗಳಿಗೆ ಬಾಳೆ ಹಣ್ಣು ಕೊಟ್ಟಿದ್ದರು ಎಂದು ಅವರು ಅಂದಿನ ದಿನಗಳನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಸೆಲ್ಫಿ ಮಾಡುತ್ತಾ ಬೆಟ್ಟ ಹತ್ತಿದ್ದರು.
ಅಪ್ಪು ಸಮಾಧಿ ಬಳಿ ಸಪ್ತಪದಿ ತುಳಿಯಲು ಬಂದ ಪ್ರೇಮಿಗಳಿಗೆ ನಿರಾಸೆ: ಎಲ್ಲ ಜೋಡಿಗಳಿಗೆ ಕುಟುಂಬ ಹಾಕಿದೆ ಈ ಷರತ್ತು