ಚಿತ್ರದುರ್ಗ: ಇಂದು ಚಿತ್ತೂರಿನಲ್ಲಿ ಮೃತಪಟ್ಟ ಬೆಂಗಳೂರಿನ ಕುಖ್ಯಾತ ರೌಡಿ ಕೊರಂಗು ಕೃಷ್ಣ ಬದುಕಿದ್ದಾಗ ಹೇಗೆಲ್ಲ ದರ್ಬಾರ್ ನಡೆಸಿದ್ದ? ಹೇಗಿತ್ತು ಅವನ ಪಾತಕ ಲೋಕದ ಲೈಫ್? ಎಂಬುದಕ್ಕೆ ಇಲ್ಲೊಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ. ಈತ ಜೈಲಿಂದ ಹೊರ ಬರುತ್ತಿದ್ದರೆ ಕರೆದೊಯ್ಯಲು 70ರಿಂದ 80 ಕಾರುಗಳು ಬರುತ್ತಿದ್ದವಂತೆ!
ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್ನ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ ಕೊರಂಗು ಕೃಷ್ಣನಿಗೂ ವಿದೇಶದಿಂದಲೇ ಬೆಂಗಳೂರು ಮತ್ತು ಶಿವಮೊಗ್ಗದ ಪಾತಕ ಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಹೆಬ್ಬೆಟ್ ಮಂಜ ಇವರಿಬ್ಬರೂ ಬದ್ಧ ವೈರಿಗಳಾಗಿದ್ದರು. ಕೊರಂಗುನನ್ನು ಏನಾದರೂ ಮಾಡಿ ಮುಗಿಸಲೇ ಬೇಕೆಂದು ಹೆಬ್ಬೆಟ್ ಮಂಜ ಸ್ಕೆಚ್ ಹಾಕಿದ್ದ. ಅದರಂತೆ ಕೋರ್ಟ್ ವಿಚಾರಣೆಗೆಂದು ಹೊರಟಿದ್ದ ಕೊರಂಗು ಕೃಷ್ಣ ಬೆಂಗಳೂರು-ಬೆಳಗಾವಿ ಮಾರ್ಗ ಮಧ್ಯೆ 2007ರಲ್ಲಿ ಹಿರಿಯೂರು ಜವಗೊಂಡನಹಳ್ಳಿ ಬಳಿಯ ಡಾಬಾದಲ್ಲಿ ಊಟಕ್ಕೆಂದು ಇಳಿದಿದ್ದ. ಈ ವೇಳೆ ಹೆಬ್ಬೆಟ್ ಮಂಜನ ಕಡೆಯವರು ದಾಳಿ ಮಾಡಿದ್ದರು. ಆಗ ಮಾರಾಕಾಸ್ತ್ರಗಳಿಂದ ಬಡಿದಾಟವಾಗಿತ್ತು. ಗುಂಡನ್ನೂ ಹಾರಿಸಲಾಗಿತ್ತು. ಘಟನೆಯಲ್ಲಿ ಕೃಷ್ಣನ ಕೈ ಬೆರಳುಗಳಿಗೆ ತೀವ್ರ ಗಾಯವಾಗಿತ್ತು. ಹೊಡೆದಾಟದಲ್ಲಿ ಕೊರಂಗು ಕಡೆಯ ಒಬ್ಬ ಸ್ಥಳದಲ್ಲೇ ಅಸುನೀಗಿದ್ದ.
ಇದನ್ನೂ ಓದಿರಿ ಹತ್ತನೇ ತರಗತಿಯಲ್ಲೇ ಕೊರಂಗು ಅಟ್ಟಹಾಸ ಮೆರೆದಿದ್ದ…
ಗಾಯಗೊಂಡಿದ್ದ ಕೃಷ್ಣ ಮತ್ತಿತರರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆ ವೇಳೆ ಸಾರ್ವಜನಿಕರು ಮತ್ತು ಪೊಲೀಸರನ್ನು ಕೊರಂಗು ಇರುವ ವಾರ್ಡಿನತ್ತ ಸುಳಿಯಲು ಕೋತಿರಾಮ ಹಾಗೂ ಮತ್ತವನ ತಂಡ ಬಿಡುತ್ತಿರಲಿಲ್ಲ. ಮಾಧ್ಯಮದವರನ್ನೂ ಬೆದರಿಸಿ ಕಳಿಸಿದ್ದರು. ಎರಡ್ಮೂರು ದಿನ ಆಸ್ಪತ್ರೆಯಲ್ಲಿದ್ದ ಕೊರಂಗು ಹಾಗೂ ಆತನ 13-14 ಸಹಚರರನ್ನು ಅಂದು ಸಬ್ ಜೈಲಾಗಿದ್ದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ಅಲ್ಲಿಯೂ ಕೊರಂಗು ಬೆಂಬಲಿಗರದ್ದೇ ದರ್ಬಾರ್ ಆಗಿತ್ತು.
ಜಾಮೀನಿನ ಮೇಲೆ ಬಿಡುಗಡೆಯಾದ ಕೊರಂಗುನನ್ನು ಕರೆದೊಯ್ಯಲು ಬೆಂಗಳೂರಿಂದ 70-80 ಕಾರುಗಳಲ್ಲಿ ಆತನ ಬೆಂಬಲಿಗರು ಜೈಲಿನ ಬಳಿ ಬಂದಿದ್ದರು. ಒಮ್ಮೆಲೆ ಅಷ್ಟೊಂದು ಕಾರುಗಳು ಬಂದದ್ದಕ್ಕೆ ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲ ಕಾರುಗಳಲ್ಲೂ ಮಾರಾಕಾಸ್ತ್ರಗಳಿದ್ದವಂತೆ. ಯಾವ ಕಾರಿನಲ್ಲಿ ಕೊರಂಗು ಪ್ರಯಾಣಿಸಿದ ಎಂಬುದು ಯಾರಿಗೂ ತಿಳಿಯಲಿಲ್ಲ. ಅಷ್ಟೊಂದು ವೈಭವದಲ್ಲಿ ಆತ ಪ್ರಯಾಣಿಸಿದ್ದ.
ಇದನ್ನೂ ಓದಿರಿ ಡಾನ್ ಜಯರಾಜ್ನ ಬಲಗೈ ಬಂಟನಾಗಿದ್ದ ಕೊರಂಗು ಕೃಷ್ಣ!
ಆ ಸಮಯದಲ್ಲಿ ಕೊರಂಗು ಸೇರಿ ಆತನ ಇಬ್ಬರು-ಮೂವರು ಸಹಚರರಿಗೆ ಮೊದಲಿಗೆ ಬೇಲ್ ಸಿಕ್ಕಿತ್ತು. ಆದರೆ, ಇನ್ನು 10 ಜನರು ಜೈಲಿನಲ್ಲಿದ್ದರು. ಆಗ ಅವರ ಮತ್ತು ಸ್ಥಳೀಯರಾದ 8 ವಿಚಾರಣಾಧೀನ ಕೈದಿಗಳ ನಡುವೆ 2008ರ ಜ.24ರಂದು ಹೊಡೆದಾಟವಾಗಿತ್ತು. ಇದನ್ನು ಖಂಡಿಸಿ 50ಕ್ಕೂ ಹೆಚ್ಚು ಸ್ಥಳೀಯರು ಜೈಲಿನೆದುರು ಪ್ರತಿಭಟಿಸಿದ್ದರು. ಕೊರಂಗು ಸಹಚರರು ಸ್ಥಳೀಯ ವಿಚಾರಣಾಧೀನ ಕೈದಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿರಿ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ವಿಧಿವಶ