ನವದೆಹಲಿ: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿ, ಉಳಿದ 8 ಪಂದ್ಯಗಳಲ್ಲಿ ಅದ್ಭುತ ಗೆಲುವಿನೊಂದಿಗೆ ಪುಟಿದೆದ್ದಿರುವ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ನಾಳೆ (ನ.19) ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್, ನಿರ್ಣಾಯಕ ಹಂತದಲ್ಲಿ ಅಥವಾ ದೊಡ್ಡ ವೇದಿಕೆಯಲ್ಲಿ ಆಸಿಸ್ ಪಡೆ ಏನು ಮಾಡಬಹುದು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ ಎಂದು ರೋಹಿತ್ ಹೇಳಿದರು. ಅಲ್ಲದೆ, ಮಹತ್ವದ ಪಂದ್ಯದಲ್ಲಿ ಆಸಿಸ್ ಪ್ರಾಬಲ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದಾಗಿಯೂ ತಿಳಿಸಿದ್ದಾರೆ.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿರುವ ಆಸಿಸ್, ನ.16ರಂದು ನಡೆದ ಎರಡನೇ ಸೆಮಿಫೈನಲ್ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ ಸುತ್ತಿಗೇರಿದೆ. ಟೂರ್ನಿಯ ಪ್ರಮುಖ ಪಂದ್ಯಗಳಲ್ಲಿ ಅತ್ಯುತ್ತಮ ಆಟವಾಡಿ ಫೈನಲ್ಗೆ ಬಂದು ತಲುಪಿರುವುದು ಭಾರತ ತಂಡಕ್ಕೆ ಬಹು ದೊಡ್ಡ ಸವಾಲು ಎಂಬುದನ್ನು ನಾವು ತಳ್ಳಿಹಾಕುವಂತಿಲ್ಲ.
ಆಸಿಸ್ ಬಗ್ಗೆ ಮಾತನಾಡಿದ ರೋಹಿತ್, ಅವರು ಪ್ರಾಬಲ್ಯ ಹೊಂದಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಕಳೆದ 8 ಪಂದ್ಯಗಳನ್ನು ಅವರು ಜಯಿಸಿದ್ದಾರೆ ಮತ್ತು ಎಲ್ಲರು ಅತ್ಯುತ್ತಮವಾಗಿ ಆಟವಾಡಿದ್ದಾರೆ. ಹೀಗಾಗಿ ನಾಳಿನ ಫೈನಲ್ ಪಂದ್ಯ ಒಳ್ಳೆಯ ಸ್ಪರ್ಧೆಯಾಗಿರಲಿದೆ. ಎರಡೂ ತಂಡಗಳು ಈ ಹಂತದಲ್ಲಿರಲು ಅರ್ಹವಾಗಿವೆ ಮತ್ತು ಫೈನಲ್ನಲ್ಲಿ ಆಡುತ್ತವೆ. ಆಸ್ಟ್ರೇಲಿಯಾ ಏನು ಮಾಡಬಹುದು ಎಂಬುದರ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ರೋಹಿತ್ ಹೇಳಿದರು.
ಎದುರಾಳಿಯ ಬಗ್ಗೆ ಭಾರತ ಹೆಚ್ಚು ಚಿಂತಿಸಲು ಬಯಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ರೋಹಿತ್, ನಮ್ಮ ತಂಡವು ನಮ್ಮದೇಯಾದ ಯೋಜನೆಗಳ ಮೇಲೆ ಗಮನ ಹರಿಸಿ, ಆಟವನ್ನು ಗೆಲ್ಲುವುದರ ಕಡೆಗೆ ಚಿಂತಿಸುತ್ತೇವೆ ಎಂದರು. ಆಸಿಸ್ ಒಂದು ಪೂರ್ಣ ಭಾಗವಾಗಿದೆ. ನಾವು ಒಂದು ತಂಡವಾಗಿ ಏನು ಮಾಡಬೇಕೆಂದು ಬಯಸುತ್ತೇವೆ ಎಂಬುದು ತುಂಬಾ ಮುಖ್ಯ. ಈ ಪಂದ್ಯಾವಳಿಯಲ್ಲಿ ನಾನು ಈ ಹಿಂದೆಯೇ ಅನೇಕ ಬಾರಿ ಹೇಳಿದ್ದೇನೆ ಮತ್ತು ಈಗ ಮತ್ತೊಮ್ಮೆ ಅದೇ ವಿಷಯ ಹೇಳುತ್ತೇನೆ. ನಾವು ಎದುರಾಳಿಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದರು.
ಅಂದಹಾಗೆ ಭಾರತ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ಫೈನಲ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಟ್ರೋಫಿ ಯಾರಾ ಪಾಲಾಗುತ್ತದೆ ಎಂಬುದು ನಾಳೆ ರಾತ್ರಿ ಗೊತ್ತಾಗಲಿದೆ. (ಏಜೆನ್ಸೀಸ್)
ಫೈನಲ್ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್ ಹೀಗಿತ್ತು…
ಏಕದಿನ ವಿಶ್ವಕಪ್ ಫಿನಾಲೆಗೆ ಸಾಕ್ಷಿಯಾಗಲಿದ್ದಾರೆ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಉಪ ಪ್ರಧಾನಿ