ಬೆಳ್ತಂಗಡಿ: ಪ್ರಸಿದ್ಧ ಪ್ರವಾಸಿ ತಾಣ ಗಡಾಯಿಕಲ್ಲು, ನರಸಿಂಹಘಡದಲ್ಲಿ ಭಾನುವಾರ ಮುಂಜಾನೆ ಕಲ್ಲಿನ ಭಾಗವೊಂದು ಬಿದ್ದು ಸ್ಫೋಟದ ಸದ್ದು ಕೇಳಿಸಿದೆ.
ನಡ ಗ್ರಾಮಕ್ಕೆ ಒಳಪಟ್ಟ ಪ್ರದೇಶದ ಸ್ಥಳೀಯರಿಗೆ ಸದ್ದು ಕೇಳಿಸಿತ್ತು. ಕಲ್ಲಿನ ಸೆಳೆ ಬಿದ್ದಿದ್ದರಿಂದ ಕೆಲಹೊತ್ತು ಧೂಳಿನಂತೆ ಹೊಗೆ ಆವರಿಸಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. 2019ರ ಪ್ರವಾಹದ ಎರಡು ತಿಂಗಳು ಮುನ್ನ ಗಡಾಯಿಕಲ್ಲಿನ ಇನ್ನೊಂದು ಪಾರ್ಶ್ವದ ಕಲ್ಲು ಬಿರುಕು ಬಿಟ್ಟು ಉರುಳಿತ್ತು. ಆಗಲೂ ಇದೇ ರೀತಿ ಭಾರಿ ಸದ್ದು ಕೇಳಿಬಂದಿತ್ತು.
ಸಾಮಾನ್ಯವಾಗಿ ಬಿಸಿಲಿನ ತಾಪ ಹೆಚ್ಚಿರುವಾಗ ಏಕಶಿಲೆಯ ಕಲ್ಲಿನಲ್ಲಿ ಸಿಲುಕಿರುವ ಇತರ ಸಣ್ಣ ಕಲ್ಲುಗಳು ಬಿರುಕುಬಿಟ್ಟಿರುತ್ತವೆ. ಇದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿದರೆ ಕಲ್ಲಿನ ಸೆಳೆಯೊಳಗೆ ನೀರು ಸೇರಿ ಕಲ್ಲು ಬೇರ್ಪಟ್ಟು ಉರುಳುತ್ತವೆ. ಕಲ್ಲುಗಳು ಉರುಳಿರುವ ಕೆಳಭಾಗದಲ್ಲಿ ಜನವಸತಿ ಇಲ್ಲದ ಕಾರಣ ಯಾವುದೇ ಅಪಾಯವಿಲ್ಲ. ಜನರು ಆತಂಕಪಡುವ ಮಟ್ಟದಲ್ಲಿ ಘಟನೆ ಸಂಭವಿಸಿಲ್ಲ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಸ್ಮಿತಾ ತಿಳಿಸಿದ್ದಾರೆ.