ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ ಚಿತ್ರಕ್ಕೆ ತೆಲುಗುನಾಡಿನಲ್ಲಿ ಎದುರಾಗಿದ್ದ ಬಿಡುಗಡೆ ಸಮಸ್ಯೆ ಬಹುತೇಕ ಬಗೆಹರಿದಿದೆ. ಬಿಡುಗಡೆ ವಿಚಾರದಲ್ಲಿ ಆಗಿದ್ದ ಗೊಂದಲ ನಿವಾರಣೆ ಸಲುವಾಗಿ ದಕ್ಷಿಣ ಭಾರತದ ಫಿಲಂ ಚೇಂಬರ್ನಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನೊಳಗೊಂಡ ತಂಡ ಭಾನುವಾರ ಸಭೆ ನಡೆಸಿದ್ದು, ಸಭೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ನಿರ್ಧರಿಸಲಾಗಿದೆ. ಮಾರ್ಚ್ 11ರಂದು ಕನ್ನಡದ ಜತೆಗೆ ತೆಲುಗಿನಲ್ಲಿಯೂ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡಿತ್ತು. ಇದರಿಂದ ತೆಲುಗಿನಲ್ಲಿ ಅದೇ ದಿನ ಬಿಡುಗಡೆ ಆಗಲಿರುವ ಮೂರು ಸಿನಿಮಾಗಳಿಗೆ ಸಮಸ್ಯೆ ಎದುರಾಗಲಿದೆ ಎಂದು ಅಲ್ಲಿನ ವಿತರಕರು ರಾಬರ್ಟ್ ಚಿತ್ರವನ್ನು ಮುಂದೂಡಿ ಎಂದಿದ್ದರು. ಈ ಬಗ್ಗೆ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಇದೀಗ ಸೌತ್ ಇಂಡಿಯನ್ ಫಿಲಂ ಚೇಂಬರ್ನಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ.
ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ವಿಜಯವಾಣಿಗೆ ಒಂದಷ್ಟು ಮಾಹಿತಿ ನೀಡಿದ್ದಾರೆ ‘ನಿರ್ಮಾಪಕ ಉಮಾಪತಿ ಅವರು ನೀಡಿದ ಪತ್ರವನ್ನು ಸೌತ್ ಇಂಡಿಯನ್ ಫಿಲಂ ಚೇಂಬರ್ ಮುಂದೆ ಪ್ರಸ್ತಾಪಿಸಿದ್ದೇವೆ. ಬಿಡುಗಡೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ನಿಗದಿತ ದಿನಾಂಕದಂದು ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಎಷ್ಟು ಚಿತ್ರಮಂದಿರ ಎಂಬ ಬಗ್ಗೆ ನಾವು ನಿರ್ಧಾರ ಮಾಡುವುದಿಲ್ಲ. ಅದು ನಿರ್ಮಾಪಕರಿಗೆ ಬಿಟ್ಟ ವಿಚಾರ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ’ ಎಂದಿದ್ದಾರೆ.
ಸದ್ಯ ಹೈದರಾಬಾದ್ನಲ್ಲಿ ಸಭೆಯಲ್ಲಿದ್ದೇನೆ. ಮಾರ್ಚ್ 11ರಂದೇ ಎರಡೂ ಭಾಷೆಗಳಲ್ಲಿ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುವುದು ಖಚಿತ. ಆದರೆ, ಚಿತ್ರಮಂದಿರಗಳ ಸಂಖ್ಯೆ ಎಷ್ಟೆಂಬುದು ಶೀಘ್ರದಲ್ಲಿ ತಿಳಿಸುತ್ತೇವೆ.
| ಉಮಾಪತಿ ಶ್ರೀನಿವಾಸ ನಿರ್ಮಾಪಕ