More

    ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಕ್ಕೆ ರೈತರ ಹಿಂದೇಟು

    ಅವಿನಾಶ್ ಜೈನಹಳ್ಳಿ ಮೈಸೂರು

    ಜಿಲ್ಲೆಯಲ್ಲಿ ಮುಂಗಾರು ಮಂಕಾಗಿರುವ ಹಿನ್ನೆಲೆಯಲ್ಲಿ ಜುಲೈ ಮೂರನೇ ವಾರ ಆರಂಭವಾದರೂ ಭತ್ತ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೂನ್ ಮತ್ತು ಜುಲೈನಲ್ಲಿ ಮಳೆ ಕೊರತೆಯಿಂದ ಕಬಿನಿ ಮತ್ತು ಕೆಆರ್‌ಎಸ್ ಡ್ಯಾಂಗಳು ನೀರಿನ ಅಭಾವ ಎದುರಿಸುತ್ತಿದ್ದರೆ, ಇತ್ತ ರೈತರು ಜಲಾಶಯದ ನೀರಿನ ಮಟ್ಟ ಗಮನದಲ್ಲಿರಿಸಿಕೊಂಡು ಭತ್ತ ಬಿತ್ತೆನೆ ಮಾಡಲು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಎರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಭತ್ತ ಬಿತ್ತನೆ ಇನ್ನೂ ತಡವಾಗುವ ಸಾಧ್ಯತೆಯಿದೆ.

    2022ರ ಹಿಂಗಾರು ಮತ್ತು ಈ ವರ್ಷದ ಮುಂಗಾರು ಪೂರ್ವ ಹಾಗೂ ಮುಂಗಾರು ದುರ್ಬಲವಾದ ಪರಿಣಾಮ ಕೆಆರ್‌ಎಸ್, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಬತ್ತಿವೆ. ಈ ಮೂರು ಜಲಾಶಯಗಳೂ ಜಿಲ್ಲೆಯ ಕೃಷಿ ಭೂಮಿಗೆ ನೀರುಣಿಸುವ ಮೂಲಕ ಭತ್ತ ಮತ್ತು ಕಬ್ಬು ಬೆಳೆಗೆ ಆಧಾರವಾಗಿವೆ. ಆದರೆ, ಮಳೆಯ ಅಭಾವದಿಂದ ಈ ಬಾರಿ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಪರಿಣಾಮ, ಭತ್ತ ಬಿತ್ತನೆ ಕಾರ್ಯ ಶೇ.10ರಷ್ಟು ಮಾತ್ರ ನಡೆದಿದೆ.

    ಭರವಸೆ ಕಳೆದುಕೊಂಡ ರೈತ


    ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಲಭ್ಯವಿದೆ. ಆದರೆ ಕೊಳ್ಳಲು ರೈತರು ನಿರಾಸಕ್ತಿ ತೋರುತ್ತಿದ್ದಾರೆ. ವಾಡಿಕೆಯಂತೆ ಮೇ-ಜೂನ್ ವೇಳೆಗೆ ಬಿತ್ತ, ಜುಲೈನಲ್ಲಿ ನಾಟಿ ಮಾಡುವ ಕಾರ್ಯ ಪೂರ್ಣವಾಗುತ್ತಿತ್ತು. ಆದರೆ ಉತ್ತಮ ಮಳೆಯಾಗದ ಕಾರಣ ಜಲಾಶಯಗಳು ಬರಿದಾಗುತ್ತಿದ್ದು, ಈ ಬಾರಿ ಭತ್ತ ಬೆಳೆಯುವ ಭರವಸೆಯನ್ನು ಜಿಲ್ಲೆಯ ರೈತರು ಕಳೆದುಕೊಂದಿದ್ದಾರೆ.

    ಮೈಸೂರು ಜಿಲ್ಲೆಯಲ್ಲಿ 1,03,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು, 8 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗಲಿದೆ. ಆದರೆ ಕಳೆದ ಆರು ತಿಂಗಳಲ್ಲಿ 299.9 ಮಿ.ಮೀ ನಷ್ಟು ವಾಡಿಕೆ ಮಳೆಯಾಗಬೇಕಿದ್ದು, ಇದರಲ್ಲಿ 271.8ರಷ್ಟು ಮಳೆಯಾಗುವ ಮೂಲಕ 38 ಮಿ.ಮೀಟರ್‌ನಷ್ಟು ಮಳೆ ಕೊರತೆಯಾಗಿದೆ. ಪರಿಣಾಮ, ಈಗಾಗಲೇ ಬಿತ್ತನೆ ಮಾಡಿರುವ ಇತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.

    ಇಳುವರಿ ಕುಂಠಿತ ಭೀತಿ

    ಸಾಮಾನ್ಯವಾಗಿ ಭತ್ತ ಬೆಳೆಯುವ ರೈತರು ಮೇ, ಜೂನ್ ತಿಂಗಳಲ್ಲಿ ಬಿತ್ತನೆ, ಜುಲೈ ವೇಳೆಗೆ ನಾಟಿ ಕಾರ್ಯ ಮುಗಿಸುತ್ತಿದ್ದರು. ಈ ಬಾರಿ ಇನ್ನೂ ಬಿತ್ತನೆ ಕಾರ್ಯ ಆಗದೆ ಇರುವುದರಿಂದ ಭತ್ತದ ನಾಟಿ ತಡವಾಗಲಿದೆ. ಒಂದು ವೇಳೆ ಆಗಸ್ಟ್‌ನಲ್ಲಿ ನಾಟಿ ಮಾಡಿದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭತ್ತದ ಹೂ ಕೊರೆಗೆ ಸಿಲುಕಿ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿವೆ.

    ಈಗಾಗಲೇ ಬಿತ್ತನೆಗೆ ಸಮಯ ಮೀರಿರುವುದು ಹಾಗೂ ಜಲಾಶಯಗಳಲ್ಲಿ ನೀರಿನ ಅಭಾವ ಇರುವುದರಿಂದ ಭತ್ತ ಬೆಳೆಯುವ ಬದಲಿಗೆ ಜೋಳ, ರಾಗಿ, ಹಲಸಂದೆ, ಉದ್ದು, ಎಳ್ಳು ಬೆಳೆಗೆ ಮುಂದಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲಸಂದೆ ಬಿತ್ತನೆ ಕಾರ್ಯ ಗರಿಗೆದರಿದೆ.

    ಕ್ಷೀಣಿಸಿದ ಒಳ ಹರಿವು

    ವಾರಗಳ ಹಿಂದೆ ಕಬಿನಿ ಜಲಾಶಯದಲ್ಲಿ 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದ ಒಳ ಹರಿವಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿದ್ದು, ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಬಂದಿದೆ. ಭಾನುವಾರ 2256 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.


    ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಮಳೆ ಕೊರತೆಯ ಕಾರಣ ಭತ್ತ ಬಿತ್ತನೆ ಆಗಿಲ್ಲ. ಜಲಾಶಯಗಳು ತುಂಬಲು ಇನ್ನೂ ಸಮಯವಿದ್ದು, ಜುಲೈ, ಆಗಸ್ಟ್‌ನಲ್ಲಿಯೂ ಬಿತ್ತನೆ ಮಾಡಲು ಅವಕಾಶವಿದೆ. ಒಂದು ವೇಳೆ ಮಳೆ ಬಾರದಿದ್ದರೆ ದ್ವಿದಳ ಧಾನ್ಯ, ಜೋಳ ಮತ್ತು ರಾಗಿಯನ್ನು ಬಿತ್ತನೆ ಮಾಡಬಹುದಾಗಿದೆ.

    – ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ

    ಕಳೆದೊಂದು ತಿಂಗಳಿಂದ ಮೋಡ ಕವಿದ ವಾತಾವರಣವಿದೆಯೇ ಹೊರತು ಮಳೆ ಬೀಳುತ್ತಿಲ್ಲ. ಪರಿಣಾಮ, ಹಳೇ ಮೈಸೂರು ಭಾಗದಲ್ಲಿ ನಿಗದಿತ ಸಮಯದಲ್ಲಿ ಭತ್ತ ನಾಟಿ ಕಾರ್ಯವಾಗಿಲ್ಲ. ಈಗಾಗಲೇ ತಡವಾಗಿರುವುದರಿಂದ ಇಳುವರಿಯೂ ಕಡಿಮೆಯಾಗಲಿದೆ. ಸಮಸ್ಯೆ ಹೀಗೆಯೇ ಮುಂದುವರೆದರೆ ಜಿಲ್ಲೆಯಲ್ಲಿ ಶೇ.50ರಷ್ಟು ಭತ್ತ ಉತ್ಪಾದನೆ ಕಡಿಮೆಯಾಗಲಿದೆ.

    ಅತ್ತಹಳ್ಳಿ ದೇವರಾಜು, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts