ಹರಿದ್ವಾರ: ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.
ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್, ಶಾರ್ಟ್ಸ್ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ರೈಲು ಹಳಿಗಳಲ್ಲಿ, ರಸ್ತೆಯಲ್ಲಿ ಹೀಗೆ ಅಪಾಯದ ಅಂಚಿನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಇದೇ ರೀತಿ ರೀಲ್ಸ್ ಹುಚ್ಚಿಗೆ ಬಲಿಯಾಗಿದ್ದಾಳೆ.
20 ವರ್ಷದ ಯುವತಿಯೊಬ್ಬಳು ಇನ್ಸ್ಟಾಗ್ರಾಂ ರೀಲ್ ವಿಡಿಯೋ ಮಾಡುವಾಗ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾಳೆ. ಉತ್ತರ ಪ್ರದೇಶದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. ಹರಿದ್ವಾರದ ರೂರ್ಕಿ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ವೈಶಾಲಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಗುರುವಾರ (ಮೇ 3) ಈ ಘಟನೆ ನಡೆದಿದೆ. ವೈಶಾಲಿ ಜೊತೆಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಶಾಲಿ ಮತ್ತು ಆಕೆಯ ಫ್ರೆಂಡ್ಸ್ ಹರಿದ್ವಾರದ ರಹೀಂಪುರ ರೈಲ್ವೇ ಕ್ರಾಸ್ ಬಳಿಯಿರುವ ಹಳಿಯಲ್ಲಿ ರೀಲ್ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಟ್ರ್ಯಾಕ್ ಮೇಲೆಯೇ ರೀಲ್ ಚಿತ್ರೀಕರಣ ಮಾಡುವಾಗ ಬಾರ್ಮರ್ ಎಕ್ಸ್ಪ್ರೆಸ್ ರೈಲು ವೈಶಾಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವೈಶಾಲಿ ಹಾರಿಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಗಂಗಾನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂದಹಾಗೆ ವೈಶಾಲಿ ಹರಿದ್ವಾರದ ಹರಿಪುರ ಟೋಂಗಿಯಾ ಗ್ರಾಮದ ನಿವಾಸಿ. ತನ್ನ ಚಿಕ್ಕಪ್ಪನೊಂದಿಗೆ ರೂರ್ಕಿಯಲ್ಲಿ ವಾಸವಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಮತ್ತು ಕಾಮೆಂಟ್ ಪಡೆಯಲು ಇಂತಹ ಸಾಹಸಮಯ ವಿಡಿಯೋಗಳ ಚಿತ್ರೀಕರಣ ಹೆಚ್ಚಾಗುತ್ತಿದ್ದು, ಯುವಕರು ಇದರಿಂದ ದೂರವಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳು ತಮ್ಮ ರೀಲ್ಗಳನ್ನು ಶೂಟ್ ಮಾಡುತ್ತಿದ್ದಾಗ 20 ವರ್ಷದ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದ. (ಏಜೆನ್ಸೀಸ್)
ಅರುಂಧತಿ ಚಿತ್ರದ ಬಾಲನಟಿ ಈಗ ಬೋಲ್ಡ್ ಬ್ಯೂಟಿ! ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ
ಮೊದಲು ರಾಯ್ ಬರೇಲಿ ಗೆಲ್ಲಿ ಆಮೇಲೆ… ನೆಚ್ಚಿನ ಚೆಸ್ ದಂತಕತೆಯಿಂದಲೇ ರಾಹುಲ್ಗೆ ಮುಖಭಂಗ!
ಗಂಡನ ಜತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲು ಹೇಳಿದ ಕತ್ರಿನಾ! ಅಷ್ಟಕ್ಕೂ ನಡೆದಿದ್ದಾದರೂ ಏನು?