ಬೆಂಗಳೂರು: ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ಚುಕ್ಕಾಣಿ ವಹಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವುದರಿಂದ, ಮನೀಷ್ ಪಾಂಡೆ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಂಡು ನಾಯಕನ ಜವಾಬ್ದಾರಿಯನ್ನೂ ನೀಡುವ ಬಗ್ಗೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಒಲವು ತೋರಿದೆ ಎನ್ನಲಾಗಿದೆ.
ಮನೀಷ್ ಪಾಂಡೆ 2009ರಲ್ಲಿ ಆರ್ಸಿಬಿ ತಂಡದಲ್ಲಿದ್ದಾಗಲೇ ಐಪಿಎಲ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದ್ದರು. ಅದೇ ವರ್ಷ ಆರ್ಸಿಬಿ ತಂಡ ಐಪಿಎಲ್ನಲ್ಲಿ ಮೊದಲ ಬಾರಿಗೆ ಫೈನಲ್ಗೇರಿತ್ತು. ಬಳಿಕ ಪುಣೆ ವಾರಿಯರ್ಸ್, ಕೋಲ್ಕತ ನೈಟ್ರೈಡರ್ಸ್ ಮತ್ತು ಸನ್ರೈಸರ್ಸ್ ಪರ ಆಡಿರುವ ಮನೀಷ್, ಮುಂಬರುವ ಆಟಗಾರರ ಹರಾಜಿನಲ್ಲಿ ಆರ್ಸಿಬಿಗೆ ಮರಳುವ ನಿರೀಕ್ಷೆ ಇದೆ.
ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮನೀಷ್ ಪಾಂಡೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಹಾಲಿ ವರ್ಷ ಕೂಡ ರಾಜ್ಯ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು.
32 ವರ್ಷದ ಮನೀಷ್ ಪಾಂಡೆ 3ನೇ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ವಿಭಾಗಕ್ಕೂ ಬಲ ತುಂಬುವ ನಿರೀಕ್ಷೆಯನ್ನು ಆರ್ಸಿಬಿ ಹೊಂದಿದೆ. ಐಪಿಎಲ್ನಲ್ಲಿ ಇದುವರೆಗೆ ಒಟ್ಟು 154 ಪಂದ್ಯ ಆಡಿರುವ ಮನೀಷ್, 30.68ರ ಸರಾಸರಿಯಲ್ಲಿ 3,560 ರನ್ ಬಾರಿಸಿದ್ದಾರೆ.
ಆರ್ಸಿಬಿ ತಂಡ ಸದ್ಯ ವಿರಾಟ್ ಕೊಹ್ಲಿ ಜತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೊಹಮದ್ ಸಿರಾಜ್ ಅವರನ್ನು ರಿಟೇನ್ ಮಾಡಿಕೊಂಡಿದೆ. ಈ ಮುನ್ನ ಮ್ಯಾಕ್ಸ್ವೆಲ್ಗೆ ನಾಯಕತ್ವ ನೀಡಲಾಗುತ್ತದೆ ಎಂದು ವರದಿಯಾಗಿದ್ದರೂ, ಅವರಿಗೆ ನಾಯಕರಾಗಿ ಅನುಭವದ ಕೊರತೆ ಹಿನ್ನಡೆ ಎನಿಸಿದೆ. ಕಳೆದ ಐಪಿಎಲ್ನಲ್ಲಿ ಕೇನ್ ವಿಲಿಯಮ್ಸನ್ ಕೊನೇ ಪಂದ್ಯದಿಂದ ಹೊರಗುಳಿದಾಗ ಮನೀಷ್ ಪಾಂಡೆ ಅವರೇ ಸನ್ರೈಸರ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಸನ್ರೈಸರ್ಸ್ ತಂಡ ಮನೀಷ್ರನ್ನು ರಿಟೇನ್ ಮಾಡಿಕೊಂಡಿಲ್ಲ.
ಸನ್ರೈಸರ್ಸ್ ತರಬೇತಿ ಬಳಗಕ್ಕೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ದಿಗ್ಗಜರ ಬಲ