ಬೆಂಗಳೂರು: ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಚಿಯಾನ್ ವಿಕ್ರಮ್ ನಟಿಸಿದ್ದ ಮಣಿರತ್ನಂ ನಿರ್ದೇಶಿಸಿದ್ದ ‘ರಾವಣ್’ ಚಿತ್ರ 2010ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಕ್ಕೂ ಮುನ್ನ, 1984ರಲ್ಲಿ ಬಾಲಿವುಡ್ನಲ್ಲಿ ‘ರಾವಣ್’ ಎಂಬ ಚಿತ್ರದಲ್ಲಿ ಸ್ಮಿತಾ ಪಾಟೀಲ್ ನಟಿಸಿದ್ದರು. ಇದೀಗ ಕನ್ನಡದಲ್ಲೂ ‘ರಾವಣ್’ ಶೀರ್ಷಿಕೆಯ ಚಿತ್ರ ಸೆಟ್ಟೇರಿದೆ.
ಗಾಂಧಿ ಜಯಂತಿಯಂದು ಚಿತ್ರದ ಮುಹೂರ್ತ ನೆರವೇರಿದೆ. ಶಿಕ್ಷಣ ವ್ಯವಸ್ಥೆಯ ಕುರಿತ ‘ಮಿಸ್ ನಂದಿನಿ’ ಎಂಬ ಚಿತ್ರ ನಿರ್ದೇಶಿಸಿದ್ದ ಗುರುದತ್ ಎಸ್.ಆರ್. ಇದೀಗ ‘ರಾವಣ್’ ಪ್ರಾರಂಭಿಸಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಕ್ರೈಮ್ ಜಾನರ್ ಕಥೆಯಾಗಿದ್ದು, ಅಪರಾಧವೊಂದರ ಬೆನ್ನತ್ತಿ ನಿಜವಾದ ‘ರಾವಣ್’ ಯಾರು ಎಂಬುದನ್ನು ತಿಳಿಯುವುದೇ ಚಿತ್ರದ ಒನ್ಲೈನ್. ‘ಕಬ್ಜ’ ಸೇರಿ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿರುವ ರತನ್ ಚೆಂಗಪ್ಪ ‘ರಾವಣ್’ ಮೂಲಕ ಹೀರೋ ಆಗಿದ್ದಾರೆ. ತಪಸ್ವಿನಿ ಪೂಣಚ್ಚ ನಾಯಕಿಯಾಗಿದ್ದು, ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಡೆಬ್ಯೂ ಮಾಡಿದ ತಪಸ್ವಿನಿ, ಸದ್ಯ ‘ಗಜರಾಮ’ ಚಿತ್ರದಲ್ಲಿ ಬಿಜಿಯಾಗಿದ್ದು, ಅದರ ಜತೆಗೆ ಇದೀಗ ‘ರಾವಣ್’ಗೂ ಆಯ್ಕೆಯಾಗಿದ್ದಾರೆ. ಜತೆಗೆ ಸಮೀಕ್ಷಾ, ‘ಸಿದ್ಲಿಂಗು’ ಶ್ರೀಧರ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ರಘು ಪಾಂಡೇಶ್ವರ್, ‘ಟಗರು’ ಸರೋಜ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೇರಳ, ಮಡಿಕೇರಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಆಲೋಚನೆ ಚಿತ್ರತಂಡದ್ದು.