ಮುಂಬೈ: ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ ಅವರ ಆಪ್ತಸ್ನೇಹಿತ ವಿನೋದ್ ಕಾಂಬ್ಳಿ. ಸಚಿನ್ಗಿಂತ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೆಲಕಾಲ ರನ್ಪ್ರವಾಹ ಹರಿಸಿ ಗಮನಸೆಳೆದಿದ್ದ ಕಾಂಬ್ಳಿ ಅಪಾರ ಅಭಿಮಾನಿಗಳನ್ನು ಸೆಳೆದಿದ್ದರು. ಸ್ಟೈಲಿಶ್ ಕ್ರಿಕೆಟಿಗರಾಗಿದ್ದ ವಿನೋದ್ ಕಾಂಬ್ಳಿ ನೆರೆಯ ಪಾಕಿಸ್ತಾನದಲ್ಲೂ ಅಭಿಮಾನಿಗಳನ್ನು ಹೊಂದಿದ್ದರು. ಅವರಿಗೆ ಪಾಕ್ ಅಭಿಮಾನಿಗಳಿಂದ ಪತ್ರವೂ ಬರುತ್ತಿತ್ತಂತೆ! ಅದನ್ನು ಪಾಕ್ ಕ್ರಿಕೆಟಿಗರೇ ಕಾಂಬ್ಳಿಗೆ ತಲುಪಿಸುತ್ತಿದ್ದರು!
‘90ರ ದಶಕದಲ್ಲಿ ಪಾಕಿಸ್ತಾನಕ್ಕೆ ಹೋದಾಗ ನಮಗೆ ಉತ್ತಮ ಆತಿಥ್ಯ ಲಭಿಸುತ್ತಿತ್ತು. 1991ರಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಳಿಕ ಪಾಕ್ ಅಭಿಮಾನಿಯೊಬ್ಬ ನನ್ನನ್ನು ಹಿಂಬಾಲಿಸುತ್ತಿದ್ದ. ಕರಾಚಿಯವನಾಗಿದ್ದ ಆತ ನನಗೆ ಪತ್ರಗಳನ್ನು ಕಳುಹಿಸುತ್ತಿದ್ದ. ಆಗ ಮೊಬೈಲ್ಗಳಿರಲಿಲ್ಲ. ದೂರವಾಣಿಯೂ ಸುಲಭವಾಗಿ ಕೈಗೆಟಕುತ್ತಿರಲಿಲ್ಲ. ಹೀಗಾಗಿ ಆತ ಪತ್ರದ ಮೂಲಕ ತನ್ನ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದ. ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ರಶೀದ್ ಲತೀಫ್ ನನಗೆ ಆ ಪತ್ರಗಳನ್ನು ತಲುಪಿಸುತ್ತಿದ್ದರು. ಆತ ಪತ್ರಗಳನ್ನು ರಶೀದ್ ಲತೀಫ್ಗೆ ತಲುಪಿಸುತ್ತಿದ್ದ. ಭಾರತ ಪ್ರವಾಸಕ್ಕೆ ಬಂದಾಗ ಲತೀಫ್ ಅದನ್ನು ನನಗೆ ಕೊಡುತ್ತಿದ್ದರು. ನಾನು ನಿವೃತ್ತಿಯಾದ ಬಳಿಕವೂ ಅಭಿಮಾನಿಗಳ ಪ್ರೀತಿ ಮುಂದುವರಿದಿದೆ’ ಎಂದು 48 ವರ್ಷದ ವಿನೋದ್ ಕಾಂಬ್ಳಿ ವಿವರಿಸಿದ್ದಾರೆ.
ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ ನಡೆದರೆ ಆರ್ಸಿಬಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಇದೆಯಂತೆ..!
‘ಪಾಕಿಸ್ತಾನ ತಂಡದ ವಿರುದ್ಧ ಆಡುವಾಗ ನಮಗೆ ಮೈದಾನದಲ್ಲಿ ವೈರತ್ವ ಇರುತ್ತಿತ್ತು. ಆದರೆ ಮೈದಾನದ ಹೊರಗೆ ನಾವು ಸ್ನೇಹಿತರಾಗಿ ಇರುತ್ತಿದ್ದೆವು. ವಕಾರ್ ಯೂನಿಸ್, ವಾಸಿಂ ಅಕ್ರಂ ಜತೆ ಸ್ನೇಹ ಹೊಂದಿದ್ದೆ. ಆ ಸ್ನೇಹವನ್ನು ನಾವು ಈಗಲೂ ಆನಂದಿಸುತ್ತೇವೆ. ಆದರೆ ಮೈದಾನಕ್ಕಿಳಿದು ಆಡುವಾಗ ನಮ್ಮ ಅತ್ಯುತ್ತಮ ನಿರ್ವಹಣೆಯನ್ನೇ ಅವರ ಎದುರು ತೋರುತ್ತಿದ್ದೆವು’ ಎಂದು ಕಾಂಬ್ಳಿ ಹೇಳಿದ್ದಾರೆ. ಭಾರತ ಪರ 17 ಟೆಸ್ಟ್, 104 ಏಕದಿನ ಪಂದ್ಯ ಆಡಿರುವ ವಿನೋದ್ ಕಾಂಬ್ಳಿ, ಕ್ರಿಕೆಟ್ ಸ್ಟಾರ್ ಪಟ್ಟದ ನಡುವೆ ಮೈಮರೆತು ಬ್ಯಾಟಿಂಗ್ ಲಯ ಕಳೆದುಕೊಂಡಿದ್ದರು. ಹೀಗಾಗಿ ಅವರು 23ನೇ ವಯಸ್ಸಿನಲ್ಲೇ ಕೊನೇ ಟೆಸ್ಟ್ ಮತ್ತು 28ನೇ ವಯಸ್ಸಿನಲ್ಲೇ ಕೊನೇ ಏಕದಿನ ಪಂದ್ಯವಾಡಿದ್ದರು.